ಮಂಗಳೂರು: ಮುಲ್ಕಿಯಲ್ಲಿ ದಲಿತ ಯುವಕನ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಾಲಿಬಾಲ್ ಆಟವಾಡುತ್ತಿದ್ದ ದಲಿತ ಯುವಕನನ್ನು ಮುಲ್ಕಿ ಇನ್ಸ್ಪೆಕ್ಟರ್ ಕುಸುಮಾಧರ ಸೂಚನೆ ಮೇರೆಗೆ ಠಾಣೆಯ ಸಿಬ್ಬಂದಿ ಕರೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ನಾಯಕ ಸೀತಾರಾಮ್ ಲೈಟ್ ಹೌಸ್ ಆರೋಪಿಸಿದ್ದಾರೆ.
ಹಳೆಯಂಗಡಿಯ ಲೈಟ್ ಹೌಸ್ ಬಳಿ ಕೆಲ ಯುವಕರು ವಾಲಿಬಾಲ್ ಆಟ ಆಡುತ್ತಿದ್ದು ಅಲ್ಲಿಗೆ ಬಂದ ಮುಲ್ಕಿ ಪೊಲೀಸ್ ಠಾಣೆ ಸಿಬ್ಬಂದಿ ವಾಲಿಬಾಲ್ ಆಟವಾಡುತ್ತಿದ್ದ ಯುವಕ ರಕ್ಷಿತ್ ಎಂಬಾತನನ್ನು ಪ್ರಶ್ನಿಸಿ ಬಳಿಗೆ ಕರೆದು “ನಿನ್ನ ತುಟಿ ಕಪ್ಪಾಗಿದೆ ನಿನ್ನನ್ನು ಟೆಸ್ಟ್ ಮಾಡಿಸಬೇಕು ತನಿಖೆ ನಡೆಸಬೇಕು ಎಂದು ಠಾಣೆಯ ಜೀಪ್ ಹತ್ತಲು ಹೇಳಿದ್ದಾರೆ.
ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿದ್ದು, ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ರಕ್ಷಿತ್ ತಂದೆ ಸೀತಾರಾಮ್ ರವರು ಅಮಾಯಕನನ್ನು ಠಾಣೆಗೆ ಕರೆದುಕೊಂಡು ಹೋಗುವ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ ಅವರ ಮೇಲೆ ದೌರ್ಜನ್ಯ ನಡೆಸಿ ಉಡಾಫೆಯಾಗಿ ಉತ್ತರ ನೀಡಿರುವುದಾಗಿ ಸೀತಾರಾಮ್ ಆರೋಪಿಸಿದ್ದಾರೆ.
ಅಮಾಯಕನನ್ನು ಬಂಧಿಸಿದ ವಿರುದ್ಧ ದಲಿತ ಸಂಘರ್ಷ ಸಮಿತಿಯ ನಾಯಕರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು.ಬಳಿಕ ಯುವಕನನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.