ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯ ಹೆಡೆಮುರಿ ಕಟ್ಟಿದರೂ ಇನ್ನೂ ಕೂಡ ಹಂತಕರು ಹತ್ಯೆಗೆ ಬಳಸಿದ ಮಾರಾಕಾಸ್ತ್ರಗಳು ಪೊಲೀಸರಿಗೆ ಪತ್ತೆಯಾಗಿಲ್ಲ.ಹಾಗಾಗಿ ಆ ಆಯುಧಗಳು ಏನಾದವು ಅನ್ನೋದು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದೆ.
ಆರೋಪಿಗಳು ಹತ್ಯೆಯ ಬಳಿಕ ಎರಡೂವರೆ ಕಿ.ಮೀ. ದೂರದ ಹೊಳೆ, ಕಾಡಿನ ನಡುವೆ ಕೊಲೆಗೆ ಬಳಸಿದ ಆಯುಧ ಎಸೆದಿರಬಹುದೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಪರಾರಿ ಆಗಿರುವ ಈ ರಸ್ತೆ ಕೂಡ ಇದಕ್ಕೆ ಪುಷ್ಟಿ ನೀಡಿದಂತಿದೆ.ಇದೆಲ್ಲರ ಹಿಂದೆ ಪ್ರಮುಖ ಆರೋಪಿ ಅಂಕತಡ್ಕದ ರಿಯಾಜ್ ಇರೋದು ಪೊಲೀಸರಿಗೆ ಸ್ಪಷ್ಟವಾಗಿದೆ.
ಹತ್ಯೆಯ ಬಳಿಕ ಎಸ್ಕೇಪ್ ಆಗಲು ರಿಯಾಜ್ ಬಳಿ ಮೊದಲೇ ರೆಡಿಯಾಗಿತ್ತು ರೂಟ್ ಮ್ಯಾಪ್;
ಪ್ರವೀಣ್ ನೆಟ್ಟಾರು ಅವರ ಉಸಿರು ನಿಲ್ಲಿಸಿದ ಮೂವರು ಆರೋಪಿಗಳು ಹತ್ಯೆಯ ಮಾಸ್ಟರ್ ಮೈಂಡ್ ಅಂಕತಡ್ಕದ ರಿಯಾಜ್ನ ಬೈಕ್ನಲ್ಲಿ ಪರಾರಿಯಾಗಿದ್ದರು.ಮಾಸ್ತಿಕಟ್ಟೆ-ಪೆರುವಾಜೆ ರಸ್ತೆ ಮೂಲಕ ಸಂಚರಿಸಿ ಮೊದಲೇ 2 ಕಿ.ಮೀ. ದೂರದ ಕಾಡಿನ ಬಳಿ ನಿಲ್ಲಿಸಿದ ಬೈಕಿನಲ್ಲಿ ಬೇರೆ ಬೇರೆ ದಾರಿಯಲ್ಲಿ ಸಂಚರಿಸಿದ್ದರು. ರಿಯಾಜ್ಗೆ ಪರಿಚಿತ ರಸ್ತೆ ಇದಾಗಿದ್ದ ಕಾರಣ ಆತ ಮೊದಲೇ ಈ ರಸ್ತೆಯಲ್ಲಿ ತೆರಳುವ ಯೋಜನೆ ರೂಪಿಸಿದ್ದ. ಪೆರುವಾಜೆ ದಾಟಿ ಕಾಪು ಕಾಡಿನ ಬಳಿಯಿಂದ ಕಾಡಿನ ನಡುವೆ ಬೆಳಂದೂರಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯಲ್ಲಿ ಓರ್ವ ಆರೋಪಿ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಇನ್ನಿಬ್ಬರು ಮುಕ್ಕೂರು ಮಾರ್ಗವಾಗಿ ಸವಣೂರು ಅಥವಾ ಅಂಕತಡ್ಕಕ್ಕೆ ಸಂಚರಿಸಿದ್ದಾರೆ ಅನ್ನೋ ಮಾಹಿತಿ ವಿಚಾರಣೆ ವೇಳೆ ಪೊಲೀಸರಿಗೆ ಲಭಿಸಿದೆ. ಬಂಧಿತ ಓರ್ವ ಸವಣೂರಿನವನಾಗಿದ್ದು ಅಲ್ಲಿಗೆ ತೆರಳಿ ಬೈಕ್ ಅಡಗಿಟ್ಟಿಸಿರಬಹುದು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಹತ್ಯೆಗೆ ಬಳಸಿದ ಮಾರಕಾಸ್ತ್ರ ಏನಾಯ್ತು?
ಹಂತಕರು ಪತ್ತೆಯಾದ್ರು ಹತ್ಯೆಗೆ ಬಳಸಿದ ಆಯುಧಗಳು ಪತ್ತೆಯಾಗದಿರೋದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಂತಕರು ಪೆರುವಾಜೆ ರಸ್ತೆಯಲ್ಲಿನ ಪುದ್ದೂಟ್ಟು ಸೇತುವೆ ಬಳಿ ಗೌರಿ ಹೊಳೆಗೆ ಅಥವಾ ಕಾಪು, ಕಜೆ, ಬೆಳಂದೂರಿನ ದಟ್ಟ ಕಾಡಿಗೆ ಮಾರಾಕಾಸ್ತ್ರ ಎಸೆದಿರಬಹುದೇ ಅನ್ನುವ ಅನುಮಾನ ದಟ್ಟವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಈ ರಸ್ತೆಯ ಇಕ್ಕೆಲಗಳ ಎಲ್ಲಾ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೊಲೆ ನಡೆದ ದಿನ ಹೊಳೆ ತುಂಬಿ ಹರಿಯುತ್ತಿದ್ದು ಆರೋಪಿಗಳಿಗೆ ಆಯುಧ ಎಸೆಯಲು ಇದು ಪೂರಕವಾಗಿತ್ತು. ಕೃತ್ಯ ಎಸಗುವ ಮೊದಲೇ ಈ ಬಗ್ಗೆ ತೀರ್ಮಾನಿಸಿದ್ದರು ಎನ್ನಲಾಗಿದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ವೇಗವಾಗಿ ಸಾಗಿದ ಬೈಕೊಂದರ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ
ಪ್ರವೀಣ್ ನೆಟ್ಟಾರು ಹತ್ಯೆಯಾದ ಕೆಲವೇ ಹೊತ್ತಲ್ಲಿ ಪೆರುವಾಜೆ- ಮುಕ್ಕೂರು-ಸವಣೂರು ಮಾರ್ಗವಾಗಿ ಬೈಕೊಂದು ಅತೀ ವೇಗದಲ್ಲಿ ಸಂಚರಿಸಿದ್ದನ್ನು ಹಲವರು ಗಮನಿಸಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಮಾಸ್ತಿಕಟ್ಟೆ ದ್ವಾರದ ಬಳಿ ಕೋರ್ಟ್ ಧರಿಸಿದ ಇಬ್ಬರು ಹೆಲ್ಮೆಟ್ ಧಾರಿಗಳು ಪ್ರವೀಣ್ ಅಂಗಡಿ ಕಡೆ ಮುಖ ಮಾಡಿ ನಿಂತದ್ದನ್ನು ಕಂಡವರಿದ್ದಾರೆ. ಹೀಗಾಗಿ ಈ ಎರಡು ಅಂಶಗಳು ಕೊಲೆಯ ಅನಂತರ ಪರಾರಿ ಆಗಲು ಈ ರಸ್ತೆ ಬಳಸಿರುವುದನ್ನು ದೃಢಪಡಿಸುತ್ತಿದೆ.