ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸಂಸದ ನಳೀನ್ ಕುಮಾರ್ ಅವರ ಬಗ್ಗೆ ಎಸ್ ಡಿಪಿಐ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಪ್ರವೀಣ್ ತಂದೆ ಮಾಧ್ಯಮಗಳ ಬಳಿ ಮಾತಾಡುತ್ತಾ ಸ್ಥಳೀಯರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಯಾಕೆ ತನಿಖೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಹತ್ಯೆಯಾದ ಪ್ರವೀಣ್ ಈ ಹಿಂದೆ ಸಂಸದ ನಳೀನ್ ಕುಮಾರ್ ಅವರ ಕಾರು ಚಾಲಕರಾಗಿದ್ದರು. ಸಂಸದರ ರಹಸ್ಯ ಹಾಗೂ ಅನೈತಿಕ ಕೆಲಸಗಳ ಬಗ್ಗೆ ಮಾಹಿತಿ ಇದ್ದ ಕಾರಣಕ್ಕೆ ಈ ಕೊಲೆ ಆಗಿರುವ ಅನುಮಾನಗಳಿವೆ. ಈ ಬಗ್ಗೆ ಪಾರದರ್ಶಕ ತನಿಖೆ ನಡೆದರೆ ಸತ್ಯ ಹೊರಗೆ ಬರಬಹುದು ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ದುರಂತ ಎಂದರೆ ಮಸೂದ್ ಹಾಗೂ ಪ್ರವೀಣ್ ಹತ್ಯೆಯ ತನಿಖೆಯಲ್ಲಿ ಅಜಗಜಾಂತರ ಮತ್ತು ತಾರತಮ್ಯ ಎದ್ದು ಕಾಣುತ್ತಿದೆ. ಮಸೂದ್ ಜೀವಕ್ಕೆ ಬೆಲೆಯೇ ಇಲ್ಲದ ರೀತಿ ತನಿಖೆ ನಡೆಯುತ್ತಿದೆ. ಮಸೂದ್ ಹತ್ಯೆ ಸಂಘಟಿತವಾಗಿ ನಡೆದಿದೆ, ಆಕಸ್ಮಿಕವಾಗಿ ನಡೆದದ್ದಲ್ಲ. ಅದರ ಎನ್ ಐಎ ತನಿಖೆ ಏಕೆ ನಡೆಯುತ್ತಿಲ್ಲ, ಕೇವಲ ಪ್ರವೀಣ್ ಹತ್ಯೆಯನ್ನು ಮಾತ್ರ ಯಾಕಾಗಿ ಎನ್ ಐಗೆ ವಹಿಸಲಾಗಿದೆ ಎಂದು ಜಲೀಲ್ ಪ್ರಶ್ನಿಸಿದರು. ಒಂದು ಸಮುದಾಯದವರನ್ನು ಬಂಧಿಸಿ ಅವರನ್ನೇ ಕೊಲೆಗಾರರ ರೀತಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.
ಪ್ರವೀಣ್ ಹತ್ಯೆ ಪ್ರಕರಣದಲ್ಲೂ ನಮಗೆ ಇನ್ನೂ ಸಂಶಯ ಇದೆ ಎಂದು ಪ್ರವೀಣ್ ತಂದೆ ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಯಾಕೆ ತನಿಖೆ ನಡೆಯುವುದಿಲ್ಲ, ಇಲ್ಲಿ ಏನೇ ನಡೆದರೂ ಆರ್ ಎಸ್ ಎಸ್ ನವರು ಎಸ್ ಡಿಪಿಐಯ ಹೆಸರು ತರುತ್ತಾರೆ. ಇಲ್ಲಿ ತನಿಖೆ ಮಾಡುವುದು ಪೊಲೀಸರೋ ಸಂಘಪರಿವಾರದವರೋ ಎಂದು ಪ್ರಶ್ನಿಸಿದರು.
ಇಂತಹ ಹತ್ಯೆಗಳ ಹೆಸರಿನಲ್ಲಿ ನಮ್ಮನ್ನು ಸದೆಬಡಿಯಬಹುದು ಎಂಬ ಕೆಟ್ಟ ಕನಸು ಇಟ್ಟುಕೊಂಡಿದ್ದರೆ ಆ ಕನಸನ್ನು ಸಂಘಪರಿವಾರ ಬಿಟ್ಟುಬಿಡಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.