ಪುತ್ತೂರು: ಶಿರಾಡಿ ಘಾಟ್ ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಇದ್ದ ಸಂದರ್ಭ ಪ್ರಭಾವ ಬಳಸಿ ಕೆಲವು ವಾಹನಗಳು ಸಂಚರಿಸುತ್ತಿರುವುದನ್ನು ಖಂಡಿಸಿದ್ದಕ್ಕೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಪೊಲೀಸ್ ದೂರು ದಾಖಲಿಸಲ್ಪಟ್ಟಿದೆ.
ವಾಹನ ಸಂಚಾರಕ್ಕೆ ಅವಕಾಶ ಕೊಡುವುದಾದರೆ ಎಲ್ಲರಿಗೂ ಅವಕಾಶ ನೀಡಬೇಕೆಂದು ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಗೌರವಾಧ್ಯಕ್ಷ ಮೊಯ್ದೀನ್ ಸಾಹೇಬ್ ಕೆ. ಒತ್ತಾಯಿಸಿದ್ದರು.
ಆದರೆ ಒತ್ತಾಯಿಸಿದ್ದಕ್ಕೆ ನನಗೆ ಜೀವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಮೋಯ್ದೀನ್ ಸಾಹೇಬ್ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ
ದೂರು ಸಲ್ಲಿಸಿದ್ದಾರೆ.
ಅಲ್ಲದೇ ಧ್ವನಿ ಮುದ್ರಿತ ಸುಳ್ಳು ಆರೋಪಗಳ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಮಾನಹಾನಿ ಮಾಡುತ್ತಿದ್ದು, ಕೆಲವೊಂದು ವಾಹನ ಚಾಲಕರು ತನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಮೋಯ್ದೀನ್ ಸಾಹೇಬ್ ಉಲ್ಲೇಖಿಸಿದ್ದಾರೆ.
ಇಂತಹವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.