ಕೇರಳ; ವಯನಾಡಿನ ದುರಂತ ಸ್ಥಳಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಆಗಮಿಸಿದ್ದಾರೆ.ಬೆಳಗ್ಗೆ 11 ಗಂಟೆಗೆ ಮೋದಿ ಅವರ ವಿಶೇಷ ವಿಮಾನ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪ್ರಧಾನಿಯವರನ್ನು ಸ್ವಾಗತಿಸಿದರು.ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಕೂಡ ಮೋದಿ ಜೊತೆಗಿದ್ದರು.
ಬಳಿಕ ಭೂಕುಸಿತ ಸಂಭವಿಸಿದ ವಯನಾಡಿನ ಮುಂಡಕೈ-ಚುರಲ್ಮಲಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸ್ಮಲಿಮಟ್ಟಂ, ಮುಂಡಕೈ ಮತ್ತು ಚುರಲ್ಮಲಾ ವೈಮಾನಿಕ ಸಮೀಕ್ಷೆಯ ನಂತರ ಪ್ರಧಾನಮಂತ್ರಿಯವರು ಚುರಲ್ಮಲಾ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.ಹೆಲಿಕಾಪ್ಟರ್ನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತಿತರರು ಪ್ರಧಾನಿ ಜೊತೆಯಲ್ಲಿದ್ದರು.
ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ನಂತರ, ಕಲ್ಪಟ್ಟಾ ಎಸ್ಕೆಎಂಜೆ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಯಲಿದ್ದು ಇಲ್ಲಿಂದ ರಸ್ತೆಯ ಮಾರ್ಗ ಮೂಲಕ ಚುರಲ್ಮಲಾಕ್ಕೆ ತೆರಳಲಿದ್ದಾರೆ ಅಲ್ಲಿ ಶಿಬಿರದಲ್ಲಿರುವವರನ್ನು ಮೋದಿ ಖುದ್ದಾಗಿ ಭೇಟಿ ಮಾಡಿ ಮಾತನಾಡಲಿದ್ದಾರೆ. ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರದಿಂದ 2000 ಕೋಟಿ ವಿಶೇಷ ಪ್ಯಾಕೇಜ್ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಶಾಸಕ ಕೆ.ಕೆ.ಶೈಲಜಾ ಟೀಚರ್, ಮುಖ್ಯ ಕಾರ್ಯದರ್ಶಿ ಡಾ. ವಿ.ವೇಣು, ಡಿಜಿಪಿ ಶೇಖ್ ದರ್ವೇಶ್ ಸಾಹಿಬ್, ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್, ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್, ಎಪಿ ಅಬ್ದುಲ್ಲಕುಟ್ಟಿ, ಸಿಕೆ ಪದ್ಮನಾಭನ್ ಮತ್ತಿತರರು ಉಪಸ್ಥಿತರಿದ್ದರು.