ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಮತ್ತು ಡೆಮಕ್ರಟಿಕ್ ಯೂತ್ ಫೆಡರೇಷನ್(ಡಿವೈಎಫ್ಐ)ನ ರಾಷ್ಟ್ರ ಘಟಕದ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಅವರ ವಿವಾಹ ಇಂದು ತಿರುವನಂತಪುರದಲ್ಲಿ ನೆರವೇರಿತು.
ಪಿಣರಾಯಿ ವಿಜಯನ್ ಅವರ ನಿವಾಸ, ತಿರುವನಂತಪುರದ ‘ಕ್ಲಿಫ್ ಹೌಸ್’ನಲ್ಲಿ ಅತ್ಯಂತ ಸರಳವಾಗಿ ಶುಭಸಮಾರಂಭ ನಡೆಯಿತು. ಪಿಣರಾಯಿ ವಿಜಯನ್ ಮತ್ತು ಮೊಹಮ್ಮದ್ ರಿಯಾಜ್ ಅವರ ಕೆಲವೇ ಕುಟುಂಬಸ್ಥರು, ಸ್ನೇಹಿತರು ಇದರಲ್ಲಿ ಪಾಲ್ಗೊಂಡಿದ್ದರು. ಕೋವಿಡ್-19 ಮಾರ್ಗಸೂಚಿಗಳ ಅನ್ವಯ 50ಕ್ಕಿಂತಲೂ ಕಡಿಮೆ ಮಂದಿ ವಿವಾಹಕ್ಕೆ ಸಾಕ್ಷಿಯಾದರು.
ಇಬ್ಬರಿಗೂ ಇದು ಎರಡನೇ ಮದುವೆ:
ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಇಬ್ಬರೂ ವಿಚ್ಛೇದಿತರಾಗಿದ್ದಾರೆ. ರಿಯಾಜ್ ಅವರಿಗೆ 2002ರಲ್ಲಿ ಮದುವೆಯಾಗಿತ್ತು. ಅದಾದ ಮೂರೇ ವರ್ಷದಲ್ಲಿ ಅವರು ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ವೀಣಾ ಕೂಡ ಮೂರು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದು, ಅವರಿಗೆ ಒಂದು ಮಗುವಿದೆ.
ವೀಣಾ ಐಟಿ ಉದ್ಯಮಿ
ವೀಣಾ ಅವರು ಬೆಂಗಳೂರಿನ ‘ಎಕ್ಸೊಲೋಜಿಕಲ್ ಸೊಲ್ಯೂಷನ್ ಪ್ರೈವೆಟ್ ಲಿಮಿಟೆಡ್’ ಎಂಬ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಇದಕ್ಕೂ ಮೊದಲು ಅವರು ಪ್ರತಿಷ್ಠಿತ ‘ಒರಾಕಲ್’ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು.
ನಿವೃತ್ತ ಐಪಿಎಸ್ ಅಧಿಕಾರಿ ಮಗ
ರಿಯಾಜ್ 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇವರ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಎಂ. ಅಬ್ದುಲ್ ಖಾದರ್. ಕಾಲೇಜು ದಿನಗಳಲ್ಲಿದ್ದಾಗಲೇ ರಿಯಾಜ್ ರಾಜಕೀಯದಲ್ಲಿ ತೊಡಗಿಸಿಕೊಂಡರು. ಎಸ್ಎಫ್ಐ ಮೂಲಕ ರಾಜಕೀಯಕ್ಕೆ ಬಂದ ಅವರು ಇದೀಗ ಸಿಪಿಐಎಂ ಯುವಘಟಕವಾಗಿರುವ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.