ಮಂಗಳೂರು: ನಿರಂತರ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಬಾಲಕನ ಶ್ವಾಸಕೋಶದ ಎಕ್ಸರೇ ತೆಗೆಸಿದ ವೇಳೆ ಆತನ ಶ್ವಾಸಕೋಶದಲ್ಲಿ ಗುಂಡು ಸೂಜಿ ಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಪುತ್ರ ಮುಬಶ್ಶೀರ್ (12) ಕಳೆದ 15 ದಿನಗಳಿಂದ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ. ಎಷ್ಟೇ ಮದ್ದು ಮಾಡಿದ್ರೂ ಗುಣಮುಖನಾಗಿರಲಿಲ್ಲ. ಹಾಗಾಗಿ ಬಾಲಕನನ್ನು ಪೋಷಕರು ಕಂಕನಾಡಿಯ ಮಕ್ಕಳ ತಜ್ಞ ಡಾ.ರಾಮ್ ಗೋಪಾಲ್ ಶಾಸ್ತ್ರಿ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಬಾಲಕನ ಎಕ್ಸರೇ ತೆಗೆಸಿದಾಗ ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಅಂಟಿಸುವ ಗುಂಡುಸೂಜಿ ಪತ್ತೆಯಾಗಿದೆ.
ಬಳಿಕ ಬಾಲಕನನ್ನು ಶಸ್ತ್ರಚಿಕಿತ್ಸೆಗೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡದೆ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ. ಇದೀಗ ಬಾಲಕ ಚೇತರಿಸಿಕೊಂಡು ಮನೆಗೆ ಮರಳಿದ್ದಾನೆ.