ಬೆಳ್ತಂಗಡಿ : ಇಂಧನ ತುಂಬಿದ ಟ್ಯಾಂಕರ್ ವೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಟ್ಯಾಂಕರ್ ನಿಂದ ಭಾರೀ ಪ್ರಮಾಣದ ಪೆಟ್ರೋಲ್ ಸೋರಿಕೆಯಾಗಿರುವ ಶಂಕೆ ಮೂಡಿದೆ.
ಘಾಟ್ ರಸ್ತೆಯ ಅಲೇಖಾನ್ ಸಮೀಪ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಮಾಗುಂಡಿಗೆ ಈ ಟ್ಯಾಂಕರ್ ಪೆಟ್ರೋಲ್ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿತ್ತು. ಚಾರ್ಮಾಡಿಯ ಅಲೇಖಾನ್ ಸಮೀಪ ಬರುತ್ತಿದ್ದಂತೆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಈ ಟ್ಯಾಂಕರ್ ನಲ್ಲಿ 4 ಸಾವಿರ ಲೀಟರ್ ಪೆಟ್ರೋಲ್ ಮತ್ತು 4ಸಾವಿರ ಲೀಟರ್ ಡೀಸೆಲ್ ತುಂಬಿತ್ತು ಎಂದು ಹೇಳಲಾಗಿದ್ದು, ಇಂಧನ ಸೋರಿಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಆತಂಕ ಮೂಡಿತ್ತು. ಕಳೆದ ಮೂರು ದಿನದಿಂದ ಬಿಸಿಲಿದ್ದುದರಿಂದ ಆತಂಕ ಹೆಚ್ಚಲು ಇನ್ನಷ್ಟು ಕಾರಣವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳಸಿಬ್ಬಂದಿ ಗಳು ದೌಡಾಯಿಸಿದ್ದು, ಸ್ಥಳ ಪರೀಶಿಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.