Thursday, June 25, 2026
Homeಕರಾವಳಿಮಂಗಳೂರು: ಆಟಿದ ಕೂಟ ಕಾರ್ಯಕ್ರಮದಲ್ಲಿ ಹಾಡಿಗೆ ದೈವ ನರ್ತನ ಮಾಡಿದ ಮಹಿಳೆ; ಆಕ್ರೋಶವಾಗುತ್ತಿದ್ದಂತೆ ಕದ್ರಿ ಮಂಜುನಾಥನಿಗೆ...

ಮಂಗಳೂರು: ಆಟಿದ ಕೂಟ ಕಾರ್ಯಕ್ರಮದಲ್ಲಿ ಹಾಡಿಗೆ ದೈವ ನರ್ತನ ಮಾಡಿದ ಮಹಿಳೆ; ಆಕ್ರೋಶವಾಗುತ್ತಿದ್ದಂತೆ ಕದ್ರಿ ಮಂಜುನಾಥನಿಗೆ ತಪ್ಪು ಕಾಣಿಕೆ ಸಲ್ಲಿಕೆ

- Advertisement -
- Advertisement -

ಮಂಗಳೂರು: ಆಟಿದ ಕೂಟ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ಮಹಿಳೆಯೊಬ್ಬರು ದೈವ ನರ್ತನ ಮಾಡಿದ ವೀಡಿಯೋ ಸೋಷಿಯಲ್ ಭಾರೀ ವೈರಲ್ ಆಗಿತ್ತು. ಈ ವೀಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿರೋಧ ವ್ಯಕ್ತವಾದ  ಬೆನ್ನಲ್ಲೇ ಮಹಿಳೆ  ಕದ್ರಿ ಮಂಜುನಾಥನಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಕದ್ರಿ ದೇವಸ್ಥಾನಕ್ಕೆ ಆಗಮಿಸಿ ಮಹಿಳೆ ಕಣ್ಣೀರಿಟ್ಟು ದೇವರ ಕ್ಷಮೆ ಕೇಳಿದ್ದಾರೆ.


ಮಂಗಳೂರಿನ ಯೆಯ್ಯಾಡಿ ಬಳಿ ನಡೆದ ಕಾರ್ಯಕ್ರದಲ್ಲಿ ಕವಿತಾ ರಾವ್‌ ಎನ್ನುವವರು ತುಳು ಹಾಡಿಗೆ ದೈವ ನರ್ತನ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅಲ್ಲದೆ ಮಹಿಳೆಯ ಡ್ಯಾನ್ಸ್ ವಿರುದ್ದ ಭಾರೀ ಆಕ್ರೋಶ ಕೇಳಿ ಬಂದಿತ್ತು, ಈ ನಡುವೆ ಆಯೋಜಕರು ಮಹಿಳೆಯ ನರ್ತನವನ್ನು ಸಮರ್ಥಿಸಿಕೊಂಡಿದ್ದು, ವಾದ ವಿವಾದಕ್ಕೆ ನಾವು ಜಗ್ಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಆದರೆ ವಿವಾದ ಹೆಚ್ಚಾಗುತ್ತಿದ್ದಂತೆ ನರ್ತನ ಮಾಡಿದ ಮಹಿಳೆ ಇಂದು ದೈವಾರಾಧಕ ದಯಾನಂದ ಕತ್ತಲ್ ಸಾರ್ ಜೊತೆಗೆ ಕದ್ರಿ ದೇವಸ್ಥಾನಕ್ಕೆ ಆಗಮಿಸಿ ರುದ್ರಾಭಿಷೇಕ ಹಾಗೂ ತಂಬಿಲ ಸೇವೆ ಸಲ್ಲಿಸಿ ದೇವರಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಕಲ್ಲುರ್ಟಿ ದೈವಕ್ಕೆ ಕೋಲ ಹಾಗೂ ಚಂಡಿಕಾಯಾಗ ಕೊಡುವ ಪ್ರಾರ್ಥನೆಯನ್ನೂ ಅವರು ಮಾಡಿಕೊಂಡಿದ್ದಾರೆ. ಮಂಜುನಾಥ ದೇವರ ಸನ್ನಿಧಿಯಲ್ಲಿ ತಪ್ಪಾಯ್ತು ಅಂತ ಕವಿತಾ ರಾವ್‌ ಗಳಗಳನೆ ಅತ್ತಿದ್ದಾರೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ದೇವರ ಎದುರು ಕ್ಷಮೆಯಾಚನೆ ಮಾಡಿದ್ದಾರೆ.

ನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ ಇನ್ನು ಮುಂದೆ ಯಾರೂ ದಯವಿಟ್ಟು ಇಂಥಹ ತಪ್ಪು ಮಾಡಲೇ ಬೇಡಿ ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!