ಮಂಗಳೂರು: ಇಲ್ಲಿನ ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ ೭೩ ನೇ ರಸ್ತೆಯಲ್ಲಿ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೆದುಳು ನಿಷ್ಕ್ರಿಯಗೊಂಡು ಧೀರಜ್ ಸಾವನ್ನಪ್ಪಿದ್ದು, ಮೃತ ಯುವಕನ ಅಂಗಾಂಗ ದಾನ ಮಾಡಲು ಕುಟುಂಬ ನಿರ್ಧರಿಸಿದೆ.
ಮಂಗಳೂರಿನ ಕುಡುಪುಕಟ್ಟೆ ನಿವಾಸಿ ಧೀರಜ್ ಮೇ 29 ರಂದು ನಸುಕಿನ ವೇಳೆ ತನ್ನ ಗೆಳೆಯ ಗಣೇಶ ಎಂಬಾತನೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಬಿಕರ್ಣಕಟ್ಟೆ ಬಳಿ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಢಿಕ್ಕಿ ಹೊಡೆದು ಅಪಘಾತಗೊಂಡಿತ್ತು.
ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಆಗ ಅಲ್ಲಿಯೇ ಸಂಚರಿಸುತ್ತಿದ್ದ ಆಟೊರಿಕ್ಷಾ ಚಾಲಕರೊಬ್ಬರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ರಾತ್ರಿ ವೇಳೆ ಧೀರಜ್ ನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಧೀರಜ್ ನ ಅಂಗಾಂಗ ದಾನ ಮಾಡಲು ಆತನ ಪೋಷಕರು ನಿರ್ಧರಿಸಿದ್ದಾರೆ. ಚೆನ್ನೈನ ವೈದ್ಯರ ತಂಡವೊಂದು ಮಂಗಳೂರಿನ ಎ ಜೆ ಆಸ್ಪತ್ರೆಗೆ ಆಗಮಿಸಿ ಧೀರಜ್ ನ ದೇಹದ ಅಂಗಾಂಗಳನ್ನು ಕೊಂಡೊಯ್ಯಲಿದೆ.