ಬಂಟ್ವಾಳ: ಪಾಣೆಮಂಗಳೂರಿನ ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಸೇತುವೆ ಇದಾಗಿದೆ. ಅಕ್ಕರಂಗಡಿಯ ಎಂದರೆ ಪಾಣೆಮಂಗಳೂರು ಕಡೆಯಿಂದ ಬರುವ ಧಾರಿ ಮಧ್ಯೆ ಸುಮಾರು ನಾಲ್ಕು ಪಿಲ್ಲರ್ ಗಳ ಪೈಕಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ಮೇಲ್ಬಾಗದಲ್ಲಿ ಡಾಮರು ಎದ್ದು ಹೋಗಿದ್ದು, ಸಣ್ಣ ಗುಂಡಿಯಾಗಿರುವುದು ಕಂಡು ಬಂದಿದೆ.
ಈ ಕುರಿತು ಆದಿತ್ಯವಾರ ರಾತ್ರಿ ವೇಳೆಯೇ ಮಾಹಿತಿಯ ನೀಡಿದ್ದು, ಇಂದು ಬೆಳಿಗ್ಗೆ ತಹಶಿಲ್ದಾರ್, ಪುರಸಭೆ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಇನ್ನು ಬಿರುಕು ಬಿಟ್ಟು ಅಪಾಯದಲ್ಲಿರುವ ಸ್ಥಳವನ್ನು ಪರಿಶೀಲನೆ ಮಾಡಿದ್ದು, ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
ಬ್ರಿಟಿಷರ ಕಾಲದ ಉಕ್ಕಿನ ಸೇತುವೆಯ ಆಯುಷ್ಯ ಮುಗಿದ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಇಲಾಖೆ ಆಯುಷ್ಯ ಮುಗಿದ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲವೆನ್ನುವ ನಾಮಫಲಕವನ್ನು ಅಳವಡಿಸಿದ್ದು, ಎಚ್ಚರಿಕೆಯನ್ನು ನೀಡಲಾಗಿದೆ.
ಆದರೆ ಇಲಾಖೆಯ ಮಾತಿಗೆ ಕಿಮ್ಮಕ್ಕು ನೀಡದೆ ಪಾಣೆಮಂಗಳೂರು ಪೇಟೆಯನ್ನು ಉಳಿಸಬೇಕೆಂಬ ಮೊಂಡು ವಾದ ಮತ್ತು ಬೇಡಿಕೆಯನ್ನು ಪೂರೈಸಲು ಬಸ್ ಸಹಿತ ಇತರ ವಾಹನಗಳು ಸಂಚಾರ ಆರಂಭಿಸಿದ್ದವು.
ಇನ್ನು ಈ ಬಗ್ಗೆ ರಾತ್ರಿ ವೇಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರದಲ್ಲಿ ಕಂದಾಯ ಇಲಾಖೆ ಅನಧಿಕೃತ ಗ್ರೂಪ್ ನಲ್ಲಿ ಸೇತುವೆಯ ಅಪಾಯದ ಬಗ್ಗೆ ಚಿತ್ರ ಗಳನ್ನು ಹಾಕಿ ಸೂಚನೆ ನೀಡಿದ್ದರು.
ಅಧಿಕಾರಿಗಳು ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ವಾಹನ ಸವಾರರು ಯಾವುದೇ ರೀತಿಯ ಭಯವಿಲ್ಲದೆ ಸಂಚಾರ ಮಾಡುತ್ತಿದ್ದು, ಅಪಾಯಕಾರಿ ಸೇತುವೆಯ ಬಗ್ಗೆ ಇಲಾಖೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ ಎಂದು ತಿಳಿಸಲಾಗಿದೆ.