ಶ್ರೀನಗರ : ಉರಿ ವಲಯದಲ್ಲಿ ಪಾಕಿಸ್ತಾನ ಸೇನಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕುಟುಂಬದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶ ವ್ಯಾಪ್ತಿಯ ಗಡಿ ನಿಯಂತ್ರಣ(ಎಲ್ಒಸಿ) ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಸೇನಾ ಪಡೆಗಳು, ನಾಗರಿಕ ಪ್ರದೇಶಗಳ ಮೇಲೆ ರಾತ್ರಿಯಿಡೀ ಶೆಲ್ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಭಾರತೀಯ ಸೇನೆಯು ಪಾಕ್ ದಾಳಿಗೆ ಪ್ರತ್ಯುತ್ತರ ನೀಡಿದ್ದು, ಅದರ ನಡುವೆಯು ಉರಿ ವಲಯದ ಸಿಲಿಕೋಟ್, ಬೋನಿಯಾರ್, ಕಮಲ್ಕೋಟ್, ಮೊಹ್ರಾ ಮತ್ತು ಜಿಂಗಲ್ ಪ್ರದೇಶಗಳ ಮೇಲೆ ಪಾಕ್ ಸೇನೆ ದಾಳಿ ನಡೆಸಿದೆ. ಇಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಜನರು ಮನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ದಾಳಿಯಿಂದ ಪಾರಾಗುವ ವೇಳೆ ಕಾರಿಗೆ ಶೆಲ್ ಅಪ್ಪಳಿಸಿದ್ದು, ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಇದರಲ್ಲಿ ನರ್ಗಿಸ್ ಬೇಗಂ ಎಂಬುವವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.