ಮೂಡಬಿದಿರೆ: ಇಲ್ಲಿನ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡಿದ ಪ್ರಕರಣ ಕಾರ್ತಿಕ್ ಭಟ್, ಹಾಗೂ ಆತನ ಪತ್ನಿ ಮತ್ತು ಮಗುವಿನ ಸಾವು. ಇದು ಸಹಜ ಸಾವು ಅಲ್ಲ, ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣದಲ್ಲಿ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬಂಧಿತರಾಗಿದ್ದ ಶ್ಯಾಮಲಾ ಭಟ್ (61) ಮತ್ತು ಅವರ ಪುತ್ರಿ ಕಣ್ಮಣಿ ರಾವ್ (36) ಅವರಿಗೆ ದ.ಕ. ಜಿಲ್ಲಾ ಸೆಶನ್ಸ್ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32), ತನ್ನ ಪತ್ನಿ ಪ್ರಿಯಾಂಕಾ (28) ಮತ್ತು ನಾಲ್ಕು ವರ್ಷದ ಮಗು ಹೃದಯ್ನನ್ನು ಕೊಲೆ ಮಾಡಿ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ನ. 9ರಂದು ಬೆಳಕಿಗೆ ಬಂದಿತ್ತು. ಇನ್ನು ಕಾರ್ತಿಕ್ ಭಟ್ ಡೆತ್ ನೋಟ್ ನಲ್ಲಿ ಈ ಸಾವಿಗೆ ತನ್ನ ತಾಯಿ ಮತ್ತು ಸಹೋದರಿಯ ಕಿರುಕುಳವೇ ಕಾರಣವೆಂದು ಉಲ್ಲೇಖೀಸಿದ್ದ. ಈ ಬಗ್ಗೆ ಮೂಲ್ಕಿ ಪೊಲೀಸರು ಕಾರ್ತಿಕ್ ಭಟ್ ಅವರ ಪತ್ನಿ ಪ್ರಿಯಾಂಕಾಳ ತಾಯಿ ನೀಡಿದ ದೂರಿನ ಆಧಾರದಲ್ಲಿ ತಾಯಿ ಶ್ಯಾಮಲಾ ಭಟ್ ಮತ್ತು ಕಣ್ಮಣಿಯನ್ನು ಬಂಧಿಸಿ ಮೂಡುಬಿದಿರೆ ಕೋರ್ಟಿಗೆ ಹಾಜರುಪಡಿಸಿದ್ದರು.
ಆರೋಪಿಗಳ ಪರ ಮೂಡುಬಿದಿರೆಯ ಶರತ್ ಶೆಟ್ಟಿ ಅವರು ಜಿಲ್ಲಾ ಸೆಶನ್ಸ್ ಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ ಎನ್ನಲಾಗಿದೆ.