ಮಂಗಳೂರು: ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ ನಡೆಸಲಾಗಿದ್ದು, ಈ ಮೂಲಕ 6 ಮಂದಿಗೆ ಜೀವದಾನ ಮಾಡಿದಂತಾಗಿದೆ.
ಕಿನ್ನಿಗೋಳಿಯ ಮಹಿಳೆ ಲಿಂಡಾ ಶಾರೆನ್ ಡಿಸೋಜ (41) ಅವರು ರಕ್ತದೊತ್ತಡ ಕಾಯಿಲೆಗೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಲಿಂಡಾ ಶಾರೆನ್ ಅವರ ಸಹೋದರರು ಅವರ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದು, ಭಾನುವಾರ ಸಂಜೆ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.
ಲಿಂಡಾ ಅವರ ಹೃದಯ ಮತ್ತು ಶ್ವಾಸಕೋಶ ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಲಿವರ್(ಯಕೃತ್ತು) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ, ಎರಡು ಕಿಡ್ನಿಗಳಲ್ಲಿ ಒಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಾಗೂ ಇನ್ನೊಂದು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಹಾಗೂ ಭಾಗಶಃ ಚರ್ಮ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗಾಗಿ ಕಸಿ ಕಟ್ಟಲು ದಾನ ಮಾಡಲಾಗಿದೆ.
“ನನ್ನ ಸಹೋದರಿ ಸಾವನ್ನಪ್ಪಿದ್ದರೂ ಆಕೆಯ ಅಂಗಾಗಳನ್ನು ದಾನ ಮಾಡುವ ಮೂಲಕ ಆಕೆ ಬೇರೆಯವರ ಬಳಿ ಜೀವಂತವಾಗಿರುತ್ತಾರೆ. ಆಕೆಯ ಬದುಕು ಇದರಿಂದ ಸಾರ್ಥಕವಾದಂತಾಗುತ್ತದೆ” ಎಂದು ಲಿಂಡಾ ಸಹೋದರರಾದ ಲ್ಯಾನ್ಸಿ ಪ್ರಕಾಶ್ ಡಿಸೋಜ ಹಾಗೂ ಸಂತೋಷ್ ಡಿಸೋಜ ಹೇಳಿದ್ದಾರೆ.
ಮಂಗಳೂರು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಿಂಡಾ ಶಾರೆನ್ ಡಿಸೋಜ!
- Advertisement -
- Advertisement -
- Advertisement -
