ಮಂಗಳೂರು: ಕೆಲಸ ಮುಗಿಸಿ ಒಂದೇ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ಮೂವರು ಕಾರ್ಮಿಕರ ಬೈಕ್ಗೆ ಲಾರಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಚೆಕ್ ಪೋಸ್ಟ್ ಬಳಿಯ ಖಂಡಿಗೆ ಕ್ರಾಸ್ನಲ್ಲಿ ಭಾನುವಾರ ಸಂಜೆ ನಡೆದಿದೆ. ಬಾಗಲಕೋಟೆ ಮೂಲದ, ಸದ್ಯ ಮಂಗಳೂರಿನ ಕಾವೂರು ಪಂಜಿಮೊಗರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭೀಮಾ ಮೃತ ದುರ್ದೈವಿ. ಸಂಗಮೇಶ ಮತ್ತು ಮಂಜುನಾಥ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಭೀಮಾ ಹಾಗೂ ಅವರ ಇಬ್ಬರು ಸಹೋದ್ಯೋಗಿಗಳು ಭಾನುವಾರ ಕೆಲಸ ಮುಗಿಸಿಕೊಂಡು ಒಂದೇ ದ್ವಿಚಕ್ರ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮಾರ್ಗವಾಗಿ ಪಂಜಿಮೊಗರಿನ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಮುಕ್ಕ ಖಂಡಿಗೆ ಕ್ರಾಸ್ ಬಳಿ ಮುಂಭಾಗದಲ್ಲಿ ಭಾರಿ ಲೋಡ್ ಹೊತ್ತು ಸಾಗುತ್ತಿದ್ದ ಲಾರಿಯೊಂದನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಬೈಕ್ ಸವಾರ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್ಗೆ ಲಾರಿ ಅಲ್ಪ ಪ್ರಮಾಣದಲ್ಲಿ ತಾಗಿದ್ದು, ನಿಯಂತ್ರಣ ತಪ್ಪಿದ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ರಸ್ತೆಗೆ ಬಿದ್ದ ಭೀಮಾ ಅವರ ತಲೆಯ ಮೇಲೆಯೇ ಲಾರಿಯ ಹಿಂಬದಿಯ ಚಕ್ರಗಳು ಹರಿದು ಹೋದ ಕಾರಣ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ನಲ್ಲಿದ್ದ ಉಳಿದಿಬ್ಬರು ರಸ್ತೆಯ ಬದಿಗೆ ಬಿದ್ದು ಗಾಯಗೊಂಡಿದ್ದಾರೆ.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ


