ಬೆಳ್ತಂಗಡಿ : ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಬಳಿಕ ಹಲವು ವಿಚಾರಗಳು ಹೊರಬರುತ್ತಿದ್ದು ಇದೀಗ ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳ ರಕ್ಷಿತಾರಣ್ಯದಲ್ಲಿ ಸ್ಯಾಟ್ಲೈಟ್ ಕರೆ ಹೋಗಿರುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಇನ್ನೊಂದು ಸ್ಫೋಟಕ ವಿಚಾರವೊಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಎಂದು ಕೇಳದ ನಿಗೂಢ ಸ್ಫೋಟ ಶಬ್ದ ಕೇಳಿಬಂದಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ವೃದ್ಧೆಯೊಬ್ಬರು ಈ ನಿಗೂಢ ಮಾಹಿತಿಯನ್ನು ನೀಡಿದ್ದಾರೆ. ಅದರಂತೆ ಧರ್ಮಸ್ಥಳ ಪೊಲೀಸರು ಸುಮಾರು ಐದು ಕಿಮೀ ರಕ್ಷಿತಾರಣ್ಯದೊಳಗೆ ಪರಿಶೀಲನೆ ನಡೆಸಿದ್ದು ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ.
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ರಕ್ಷಿತಾರಣ್ಯದಲ್ಲಿ ಸ್ಯಾಟಲೈಟ್ ಕರೆ ಹೋದ ಸುಮಾರು ಮೂರು ಕಿಮೀ ಅಂತರದಲ್ಲಿರುವ ಬಾರೆಮನೆ ನಿವಾಸಿಗಳನ್ನು ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ತಂಡ ತನಿಖೆ ಮಾಡುವ ವೇಳೆಯಲ್ಲಿ ಬಾರೆಮನೆಯ ನಿವಾಸಿ ಚೆಲುವಮ್ಮ(60) ನಿಗೂಢ ಸ್ಫೋಟದ ವಿಚಾರವನ್ನು ತಿಳಿಸಿದ್ದಾರೆ.
ಚೆಲುವಮ್ಮ ನೀಡಿದ ಸ್ಫೋಟಕ ಮಾಹಿತಿ : ಕಳೆದ ಎಂಟು ದಿನದ ಹಿಂದೆ ಮಗ ಹಾಗೂ ನಾನು ಮಲಗಿದ್ದೆವು. ಸುಮಾರು ರಾತ್ರಿ 11 ಗಂಟೆಗೆ ಭಾರಿ ದೊಡ್ಡ ಶಬ್ದ ಬಂತು ಒಮ್ಮೆಲೇ ಮನೆ ಅಲುಗಾಡಿದಂತಾಯಿತು. ಈ ವಿಷಯವನ್ನು ಮಗನಾದ ಮೋಹನನಿಗೆ ತಿಳಿಸಿದೆ. ಅವನು ಗಾಢ ನಿದ್ರೆಯಲ್ಲಿದ್ದ. ಆನೆ ನಮ್ಮ ಕಡೆ ಜಾಸ್ತಿ ಬರುತ್ತಿದೆ ಅದಕ್ಕೆ ಪಟಾಕಿ ಸಿಡಿಸಿ ಓಡಿಸುತ್ತಾರೆ. ಅದೇ ಇರಬೇಕು ಅಂದುಕೊಂಡೆವು. ಆದ್ರೆ ಈ ಹಿಂದೆ ಎಂದು ಆ ರೀತಿಯ ದೊಡ್ಡ ಶಬ್ದ ಕೇಳಿಸಿಲ್ಲ. ಇದುವೇ ಮೊದಲು ಇಷ್ಟು ದೊಡ್ಡದರಲ್ಲಿ ಶಬ್ದ ಕೇಳಿಸಿದ್ದು. ಮೊನ್ನೆ ಮಂಗಳೂರಲ್ಲಿ ಬಾಂಬ್ ಸ್ಫೋಟ ನಡೆದಿದೆ. ಸ್ಯಾಟ್ಲೈಟ್ ಕರೆ ಹೋಗಿದೆ ಅಂತ ಮಗ ಹೇಳುತ್ತಿದ್ದ ಅದಲ್ಲದೆ ಟಿವಿಯಲ್ಲಿ ಬರುತ್ತಿದೆ ಅದರ ಬಗ್ಗೆ ನನಗೆ ಏನೂ ಜಾಸ್ತಿ ಗೊತ್ತಿಲ್ಲ ಎಂದು ಮಹಾಎಕ್ಸ್ ವೆಬ್ ಸೈಟ್ ಗೆ ಘಟನೆಯ ಮಾಹಿತಿ ನೀಡಿದ್ದಾರೆ.