Monday, June 30, 2025
Homeತಾಜಾ ಸುದ್ದಿನೂತನ 'ಮಹಾ' ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಆಫರ್‌: ಬಿಜೆಪಿ ಶಾಸಕರಿಂದ 100 ಕೋಟಿ ಕೇಳಿದ್ದ ಸುಲಿಗೆಕೋರರ...

ನೂತನ ‘ಮಹಾ’ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಆಫರ್‌: ಬಿಜೆಪಿ ಶಾಸಕರಿಂದ 100 ಕೋಟಿ ಕೇಳಿದ್ದ ಸುಲಿಗೆಕೋರರ ಬಂಧನ

spot_img
- Advertisement -
- Advertisement -

ಮುಂಬೈ: ಶಾಸಕರೊಬ್ಬರಿಗೆ ಮಹಾರಾಷ್ಟ್ರ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸಲು 100 ಕೋಟಿ ರೂಪಾಯಿ ಪಾವತಿಸುವಂತೆ ಕೇಳಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಸಚಿವ ಸಂಪುಟ ಪುನರ್‌ರಚನೆಯ ಕುರಿತು ಊಹಾಪೋಹಗಳು ಕೇಳಿ ಬಂದಿರುವ ಬೆನ್ನಲ್ಲೇ ಈ ಪ್ರಕರಣ ಬಹಿರಂಗವಾಗಿದೆ.

ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸಲು ದೌಂಡ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್‌ ಕೌಲ್‌ ಅವರಿಗೆ ಆಮಿಷವೊಡ್ಡಲಾಗಿತ್ತು. ಸಚಿವನಾಗಲು 100 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂದು ಆರೋಪಿಗಳು ಪ್ರಸ್ತಾಪ ಮುಂದಿಟ್ಟಿದ್ದರು. ಜುಲೈ 16ರಂದು ಶಾಸಕ ರಾಹುಲ್‌ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿದ್ದ ರಿಯಾಜ್‌ ಶೇಖ್‌ ಎಂಬ ವ್ಯಕ್ತಿ ‘ಆಫರ್‌’ ಬಗ್ಗೆ ಚರ್ಚಿಸಲು ಶಾಸಕರನ್ನು ಭೇಟಿ ಮಾಡಬೇಕು ಎಂದಿದ್ದ.

ಆಫರ್‌ ಬಗ್ಗೆ ತಿಳಿದು ಶಾಸಕ ರಾಹುಲ್‌, ಮುಂಬೈನ ಹೋಟೆಲ್‌ ಒಂದರಲ್ಲಿ ಆತನನ್ನು ಭೇಟಿ ಮಾಡಿದ್ದರು. ಹಿರಿಯ ರಾಜಕಾರಣಿಯೊಬ್ಬರು ಸಚಿವ ಸ್ಥಾನ ಕೊಡಿಸುವ ಕೆಲಸ ಮಾಡಿಕೊಡುತ್ತಾರೆ. ಆದರೆ, ಅದಕ್ಕಾಗಿ 100 ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎಂದು ರಿಯಾಜ್‌ ಹೇಳಿದ್ದ. ಆ ಡೀಲ್‌ನಲ್ಲಿ ಆಸಕ್ತಿ ಹೊಂದಿರುವಂತೆ ವರ್ತಿಸಿದ್ದ ಶಾಸಕ, ಡೀಲ್‌ ಮೊತ್ತವನ್ನು ಕಡಿಮೆ ಮಾಡುವಂತೆ ಮಾತನಾಡಿದ್ದರು. ನೂರು ಕೋಟಿ ಬದಲು 90 ಕೋಟಿ ರೂಪಾಯಿಗೆ ಅಂತಿಮಗೊಳಿಸಲಾಗಿತ್ತು.

ಆದರೆ, ಶೇಕಡ 20ರಷ್ಟು ಹಣವನ್ನು ಮುಂಗಡವಾಗಿ ಪಾವತಿಸುವಂತೆ ರಿಯಾಜ್‌ ಬೇಡಿಕೆ ಇಟ್ಟಿದ್ದ. ಅದಕ್ಕೂ ಒಪ್ಪಿದ್ದ ಶಾಸಕ ರಾಹುಲ್‌, ಮತ್ತೊಮ್ಮೆ ಭೇಟಿಯಾಗಲು ತಿಳಿಸಿದ್ದರು. ಈ ಬೆಳವಣಿಗೆಗಳ ಬಗ್ಗೆ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದ ಶಾಸಕ, ಮೆರೈನ್‌ ಡ್ರೈವ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದರು. ಮುಂಬೈ ಪೊಲೀಸ್‌ ಕಮಿಷನರ್‌ ವಿವೇಕ್‌ ಫನಸಾಲ್ಕರ್‌ ಅವರು ತನಿಖೆಯ ನಿರ್ವಹಣೆ ಮಾಡಿದ್ದರು. ಹಾಗೂ ಪ್ರಕರಣವನ್ನು ನಗರದ ಅಪರಾಧ ವಿಭಾಗಕ್ಕೆ ವರ್ಗಾಯಿಸಿದರು.

ಸುಲಿಗೆ ಕೋರರನ್ನು ಜಾಲಕ್ಕೆ ಸಿಲುಕಿಸುವ ಯೋಜನೆ ರೂಪಿಸಿಕೊಂಡ ಸಿಟಿ ಕ್ರೈಂ ಬ್ರ್ಯಾಂಚ್‌ ಪೊಲೀಸರು, ಮುಂಗಡ ಹಣವಾಗಿ 18 ಕೋಟಿ ರೂಪಾಯಿ ಪಡೆದುಕೊಳ್ಳಲು ಹೋಟೆಲ್‌ಗೆ ಬರುವಂತೆ ಶಾಸಕರಿಂದ ಹೇಳಿಸಿದರು. ಆರೋಪಿ ಮತ್ತು ಆತನ ಸಹಚರರು ಹೋಟೆಲ್‌ಗೆ ಬರುತ್ತಿದ್ದಂತೆ ಸುಲಿಗೆ ನಿಗ್ರಹ ತಂಡವು ಅವರನ್ನು ವಶಕ್ಕೆ ಪಡೆದರು. ವಿಚಾರಣೆಗಾಗಿ ಅವರನ್ನು ಪೊಲೀಸ್‌ ಕೇಂದ್ರ ಕಚೇರಿಗೆ ಕರೆತರಲಾಯಿತು.

ರಿಯಾಜ್‌ ಶೇಖ್‌, ಯೋಗೇಶ್‌ ಕುಲ್ಕರ್ಣಿ, ಸಾಗರ್‌ ಸಾಂಘ್ವಿ ಹಾಗೂ ಜಾಫರ್‌ ಉಸ್ಮಾನಿ ಬಂಧಿತ ಆರೋಪಿಗಳು. ಎಲ್ಲ ನಾಲ್ವರು ಆರೋಪಿಗಳನ್ನು ಜುಲೈ 26ರವರೆಗೂ ಪೊಲೀಸ್‌ ವಶಕ್ಕೆ ನೀಡಲಾಗಿದೆ. ಆರೋಪಿಗಳಿಂದ ಮೂರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಉಸ್ಮಾನಿ ಈ ಗ್ಯಾಂಗ್‌ನ ಪ್ರಮುಖ ವ್ಯಕ್ತಿ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ. ಆತ ದೆಹಲಿಯ ವ್ಯಕ್ತಿಯೊಬ್ಬರ ಜೊತೆಗೆ ಸಂಪರ್ಕದಲ್ಲಿದ್ದು, ಆ ವ್ಯಕ್ತಿಗೂ ಪ್ರಕರಣಕ್ಕೂ ಇರುವ ಸಂಬಂಧ ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!