ಮಂಗಳೂರು: ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗುರುವಾರ ದ.ಕ.ಜಿಲ್ಲಾ ಎನ್ಎಸ್ಯುಐ ಕಾರ್ಯಕರ್ತರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟಿಸಿದರು.
ಎನ್ಎಸ್ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ‘ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಉತ್ತರ ಪ್ರದೇಶದ ರೀತಿಯಲ್ಲೇ ಕರ್ನಾಟಕವೂ ಆಗುತ್ತಿದೆ ಎಂಬ ಭಯ ಕಾಡುತ್ತಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ಕೊಡುವ ಬದಲಾಗಿ ಆರೋಪಿಗಳ ಶೀಘ್ರ ಪತ್ತೆಗೆ ಕ್ರಮವಹಿಸಿ, ಸಂತ್ರಸ್ತೆಗೆ ನ್ಯಾಯ, ಭದ್ರತೆ ಒದಗಿಸಬೇಕು.ಭೇಟಿ ಬಚಾವೋ-ಭೇಟಿ ಪಡಾವೋ ಎಂಬುದು ಬಿಜೆಪಿಗರ ನಾಮಕಾವಸ್ಥೆ ಹೇಳಿಕೆಯಾಗಿದ್ದು, ಸದನದಲ್ಲಿ ಬ್ಲೂಫಿಲ್ಮ್, ಸ್ನೇಹಿತನ ಪತ್ನಿಗೆ ಮುತ್ತಿಡುವ ನಾಯಕರೇ ಅತ್ಯಾಚಾರಿಗಳಿಗೆ ಪ್ರೇರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆದು ಪ್ರತಿಭಟಿಸಲು ಕಾರ್ಯಕರ್ತರ ಯತ್ನಿಸಿದಾಗ, ಪೊಲೀಸರು ತಡೆದಿದ್ದಾರೆ.
ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಸಂಯೋಜಕ ಝೈನ್ ಆತೂರು, ಪ್ರಮುಖರಾದ ಪವನ್ ಸಾಲ್ಯಾನ್, ನಿಖಿಲ್ ಪೂಜಾರಿ, ರಮಾನಂದ ಪೂಜಾರಿ, ಸಿರಾಜ್ ಗುದ್ರು, ಬಾತಿಷ್ ಅಳಕೆಮಜಲು, ಲೆಸ್ಟರ್ ಪಿಂಟೊ, ಅಯಾಝ್ ಚಾರ್ಮಾಡಿ, ಯಶವಂತ್, ಅಬ್ದುಲ್ ರಾಝಿ, ನಜೀಬ್ ಮಂಚಿ, ಶೋನಿತ್ ಬಂಗೇರ, ನಿಖಿಲ್ ಶೆಟ್ಟಿ, ಅಯಾನ್, ಶಕೀಲ್, ನೌಫಲ್ ಅಬ್ದುಲ್ಲಾ, ಝುಬೈರ್ ಪಿಲಿಗೂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.