ಹಾಸನ: ಬೇಲೂರು ಚನ್ನಕೇಶವ ದೇಗುಲದ ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ನೋಟೀಸ್ ನೀಡಲಾಗಿದೆ. ವಾಣಿಜ್ಯ ಮಳಿಗೆಯನ್ನು ಶೀಘ್ರ ಖಾಲಿ ಮಾಡುಂತೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೋಟೀಸ್ ನೀಡಿದ್ದಾರೆ.
ಬೇಲೂರು ಶ್ರೀಚನ್ನಕೇಶವ ದೇವಾಲಯದ ಆವರಣದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಮನವಿ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿ ರೆಹಮಾನ್ ಷರೀಫ್ ಗೆ ನೋಟೀಸ್ ನೀಡಿದ್ದಾರೆ. ನೀವು ದೇವಾಲಯಕ್ಕೆ ಸೇರಿದ ವಾಣಿಜ್ಯ ಮಳಿಗೆಯನ್ನು 1-9-2018 ರಿಂದ 30-8-2023 ರವರೆಗೆ ಐದು ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವುದು ಸರಿ ಅಷ್ಟೇ. ಆದರೆ ಧಾರ್ಮಿಕ ದತ್ತಿ ಕಾಯ್ದೆ 2002 ರ ನಿಯಮ 31 (12) ರಿ ಸಂಸ್ಥೆ ಅನ್ವಯದ ಜಮೀನು, ಕಟ್ಟಡಗಳು, ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದುಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ. ನಿಯಮವಿರುವುದರಿಂದ ಸದರಿ ನಿಯಮದನ್ವಯ ನೀವು ಗುತ್ತಿಗೆ ಪಡೆದಿರುವ ಮಳಿಗೆಯನ್ನು ನೋಟೀಸ್ ತಲುಪಿದ ಮೂರು ದಿನದ ಒಳಗೆ ಖಾಲಿ ಮಾಡತಕ್ಕದ್ದು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುಲಾಗುತ್ತದೆ ಎಂದು ಶ್ರೀಚನ್ನಕೇಶವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೋಟೀಸ್ ನಲ್ಲಿ ತಿಳಿಸಿದ್ದಾರೆ
ದೇಗುಲದ ಮುಂಭಾಗ ಸುಮಾರು 50 ವರ್ಷಗಳಿಂದ ರೆಹಮಾನ್ ಷರೀಫ್ ಗೊಂಬೆ,ಟಾಯ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ. 1-9-2018 ರಿಂದ 30-8-2023 ರವರೆಗೆ ಮಳಿಗೆಯ ರಿನ್ಯುವಲ್ ಮಾಡಿಸಿಕೊಂಡಿದ್ದಾರೆ. ಆದ್ರೆ ಧಾರ್ಮಿಕ ದತ್ತಿ ಕಾಯ್ದೆ 2002 ರ ನಿಯಮ 31(12) ರಿ ಸಂಸ್ಥೆ ಅನ್ವಯ ಅನ್ಯಧರ್ಮಿಯರಿಗೆ ಹಿಂದೂ ದೇಗುಲದ ಬಳಿ ಜಾಗ,ಮಳಿಗೆ ,ಕಟ್ಟಡ ಗುತ್ತಿಗೆ ನೀಡತಕ್ಕುದಲ್ಲ ಎಂಬ ನಿಯಮವಿದೆ.
ಈ ನಿಯಮದಡಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದ್ದು,ಆ ಮನವಿ ಹಿನ್ನೆಲೆ ಮುಸ್ಲಿಂ ವ್ಯಾಪಾರಿ ರೆಹಮಾನ್ ಷರೀಫ್ ಗೆ ನೋಟೀಸ್ ನೀಡಲಾಗಿದೆ. ಅಂಗಡಿ ತೆರವುಗೊಳಿಸುವುದಾ ಅಥವಾ ಮುಂದುವರೆಸುವುದಾ ಎಂಬ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರಿಗೆ ಪತ್ರ ಬರೆಯಲಾಗಿದೆ. ಅವರ ನಿರ್ದೇಶನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚನ್ನಕೇಶವ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ತಿಳಿಸಿದ್ದಾರೆ.