ಬೆಂಗಳೂರು: ಯಾವುದೇ ಕಾರಣಕ್ಕೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಇಲ್ಲ. ಮಾರ್ಚ್ ನಿಂದ ಮೇ ವರೆಗೆ ವಿದ್ಯತ್ ಬೇಡಿಕೆ ಎಷ್ಟಿದೆ ಅಂತ ಮೊದಲೇ ಯೋಜನೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
14800 ಮೆಗಾವ್ಯಾಟ್ ಮಾರ್ಚ್ 8 ರಂದು ಲೋಡ್ ಕಂಡು ಬಂದಿದ್ದು ಅದು ಯಶಸ್ವಿಯಾಗಿದೆ, ಈಗ 10000 ಮೆಗಾ ವ್ಯಾಟ್ ಇದೆ. ನಿರಂತರ ಮಳೆಯಾಗಿರುವ ಕಾರಣ ಐಪಿ ಸೆಟ್ ಲೋಡ್ ಕಡಿಮೆಯಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ನವೀಕರಣ ಇಂಧನ ಉತ್ಪಾದನೆ ಹೆಚ್ಚಾಗಿರುವ ಕಾರಣ ವಿದ್ಯುತ್ ಕೊರತೆ ಇಲ್ಲ. ಸರಬರಾಜಿನಲ್ಲಿ ವ್ಯತ್ಯಾಸ ಆಗಿರಬಹುದು ಅದನ್ನು ಸರಿಪಡಿಸುವ ಯತ್ನ ಮಾಡಲಾಗುವುದು ಎಂದಿರುವ ಸುನೀಲ್ ಕುಮಾರ್, ಕಾಂಗ್ರೆಸ್ ಅಧ್ಯಕ್ಷರು ಊಹಾಪೋಹದ ಮಾತುಗಳನ್ನು ಆಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನೂ ಒಂದೂವರೆ ಮೂರು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಇದೆ. ಪ್ರತಿ ದಿನ 13-15 ರೇಕು ಕಲ್ಲಿದ್ದಲು ಬರುತ್ತದೆ. ಡಿ.ಕೆ. ಶಿವಕುಮಾರ್ ಇಂಧನ ಇಲಾಖೆ ನಿರ್ವಹಣೆ ಮಾಡಿದ್ದರು. ಅವರು ಮಾಹಿತಿ ತೆಗೆದುಕೊಂಡು ಮಾತನಾಡಬೇಕು. ಅವರು ಇಲಾಖೆ ಹೇಗೆ ನಿರ್ವಹಣೆ ಮಾಡಿದರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಇಂಧನ ಸಚಿವ ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.