ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವವರು ನಟಿ ನಿಧಿ ಸುಬ್ಬಯ್ಯ. ಆರಂಭದಿಂದಲೂ ಈಕೆ ತನ್ನ ಕಾಮಿಡಿ ಸೆನ್ಸ್ ನಿಂದಲೂ ಮನೆಮಂದಿ ಹಾಗೂ ಜನರಿಗೆ ಇಷ್ಟವಾಗ್ತಿದ್ದಾರೆ. ಒಂದು ಕಾಲದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿರೋ ಈ ಕೊಡಗಿನ ಬ್ಯೂಟಿ ಆಟದಲ್ಲೂ ಎಚ್ಚರಿಕೆಯಿಂದಿದ್ದಾರೆ. ಎಲ್ಲರಿಗೂ ಇಷ್ಟವಾಗುವಂತೆ ಅವರ ನಡೆ ನುಡಿ ಇದೆ.
ಬಿಗ್ ಬಾಸ್ ಮನೆಯಲ್ಲಿ ನೀಡಿದ ವೈರಸ್ ಟಾಸ್ಕ್ ಎಲ್ಲೆಲ್ಲೋ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ದ್ವೇಷದ ಬೆಂಕಿ ಕೂಡ ಹತ್ತಿಕೊಳ್ಳುತ್ತಿದೆ. ಹೀಗಿರುವಾಗಲೇ ಒಬ್ಬರಿಗೊಬ್ಬರು ಗಂಭೀರ ಆರೋಪವನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮಂಜು ಮತ್ತು ಶಮಂತ್ ವಿರುದ್ಧ ನಿಧಿ ಸುಬ್ಬಯ್ಯ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ.

ಮಂಜು ಮತ್ತು ಶಮಂತ್ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ನಮ್ಮ ತಂಡದವರು ಯಾರೊಬ್ಬರೂ ಹುಡುಗಿಯನ್ನು ಮುಟ್ಟಿಲ್ಲ. ಆದರೆ, ಅವರು ತಂಡದವರು ಹಾಗಲ್ಲ. ಪ್ಲ್ಯಾನ್ ಮಾಡಿ ಅವರು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ. ತುಂಬಾನೇ ರಫ್ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಮಂಜು ಬಂದು ನನ್ನನ್ನು ಎಲ್ಲೆಲ್ಲೋ ಮುಟ್ಟಿ ಎಸೆದಿದ್ದಾರೆ. ನಮಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಸಾಕು ಇಲ್ಲಿಗೆ ನಿಲ್ಲಿಸಿ ಎಂದು ಕಣ್ಣೀರು ಹಾಕಿದ್ದಾರೆ.

ಆದರೆ, ಮಂಜು ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪ್ರಶಾಂತ್ ಜತೆ ಮಾತನಾಡುವಾಗ, ನಾನು ಯಾವುದನ್ನೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ನಮಗೆ ಖುಷಿಖುಷಿಯಾಗಿ ಆಡಬೇಕು ಎನ್ನುವ ಆಸೆ ಇತ್ತು. ಆದರೆ, ನೀವೇ ವೈಲೆಂಟ್ ಆಗಿ ಆಡುವ ಮೂಲಕ ಆಟದ ದಿಕ್ಕನ್ನೇ ಬದಲಿಸಿದ್ದೀರಿ ಎಂದಿದ್ದಾರೆ.