ಬೆಂಗಳೂರು : ಕೋವಿಡ್ ರೋಗಿಗಳ ಕ್ವಾರಂಟೈನ್ ಅವಧಿಯನ್ನು 17 ದಿನಗಳಿಗೆ ಏರಿಕೆ ಮಾಡಲಾಗಿದೆ. ವೃದ್ಧರಿಗೆ ಕಡಿಮೆ ಲಕ್ಷಣ ಇದ್ದರೂ ಕ್ವಾರಂಟೈನ್ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 4 ತಿಂಗಳಿಂದ 1450 ಪ್ರಕರಣ ಇದ್ದವು. ಕಳೆದ 9 ದಿನಗಳಿಂದ ನಾಲ್ಕು ಪಟ್ಟು ಹೆಚ್ಚಳ ಆಗಿದೆ ಎಂದರು.
ನಾಳೆಯಿಂದ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ. ಕಡಿಮೆ ರೋಗ ಲಕ್ಷಣ ಇದ್ದವರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು. ಪ್ರತ್ಯೇಕ ಕೊಠಡಿ, ಶೌಚಾಲಯ ಇದ್ದರೆ ಮಾತ್ರ ಮನೆಯಲ್ಲಿ ಕ್ವಾರಂಟೈನ್ಗೆ ಅವಕಾಶ ನೀಡಲಾಗುತ್ತದೆ. ಮನೆಯಲ್ಲಿ ಅವರನ್ನು ನೋಡಿಕೊಳ್ಳಲು ಒಬ್ಬರು ಇರಲೇಬೇಕು. ಇಲ್ಲವಾದರೆ ಅವರನ್ನು ಸರ್ಕಾರ ಕ್ವಾರಂಟೈನ್ ಮಾಡಲಿದೆ. ಯಾರೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದು ಬೇಡ. ಆಯಾ ಭಾಗದಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಗಲಿದೆ. ರಾಜ್ಯವ್ಯಾಪಿ ಬೂತ್ಗಳಿಗೊಂದರಂತೆ ಟಾಸ್ಕ್ ಕಮಿಟಿ ಇರಲಿದೆ ಎಂದು ಹೇಳಿದರು.