ಬಂಟ್ವಾಳ ; ನೇತ್ರಾವತಿ ನದಿಯ ದೋಣಿಯ ಅಂಬಿಗ ನಾಪತ್ತೆಯಾಗಿದ್ದಾರೆ. ಬರಿಮಾರು ಕಡವಿನಬಾಗಿಲು ನಿವಾಸಿ ಅಂಬಿಗ ದಿವಾಕರ ನಾಪತ್ತೆಯಾದ ಅಂಬಿಗ.
ದಿವಾಕರ ಅವರು ಸುಮಾರು 30 ವರ್ಷಗಳಿಂದ ಅಂಬಿಗನಾಗಿ ಕೆಲಸ ಮಾಡುತ್ತಿದ್ದು, ಇವರು ನುರಿತ ಈಜುಗಾರರಾಗಿದ್ದರು. ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಇವರು ಪ್ರತಿದಿನ ಕೆಲಸ ಮಾಡುತ್ತಿದ್ದರು.
ಜ.3 ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಪಡೆದು, ವಾಪಸ್ ತೆರಳಿದ್ದು, 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ದಿವಾಕರ ಅವರು ಕಾಣಿಸಿದ ಕಾರಣ ಅವರ ಪತ್ನಿ ಸರಪಾಡಿಯ ಅಂಗಡಿಯ ಮೂಲಕ ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದ್ದರು.
ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್, ಚಪ್ಪಲಿ ಕಂಡು ಬಂದಿದೆ. ದಿವಾಕರ ಅವರಿಗೆ ಮೂರ್ಛೆರೋಗವಿದ್ದು, ಈ ಹಿಂದೆ ಕೂಡಾ ನದಿ ಬದಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಇವತ್ತು ಕೂಡಾ ಮೂರ್ಛೆ ರೋಗ ಭಾದಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದು, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.