ಬೆಳ್ತಂಗಡಿ: ಕಳೆದ 30 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೇಂದ್ರವಾಗಿದ್ದ ಸರಕಾರಿ ಶಾಲೆಯೊಂದು ಈಗ ಅಕ್ಷರಶಃ ಪಾಳು ಬಿದ್ದ ಮನೆಯಂತಾಗಿದೆ.
ಹೌದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ 8 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದು, ಸದ್ಯದಲ್ಲೇ ಕುಸಿದು ಬಿದ್ದು ಮಣ್ಣಲ್ಲಿ ಮಣ್ಣಾಗುವ ಪರಿಸ್ಥಿತಿಗೆ ತಲುಪಿರುವುದು ಬೇಸರದ ಸಂಗತಿ.
ನೆರಿಯ ಗ್ರಾಮದ ದೇವಗಿರಿ, ಅಂಬಟೆಮಲೆ ಸುತ್ತಮುತ್ತಲಿನ ಪರಿಸರದ ಮಕ್ಕಳಿಗೆ 1ರಿಂದ 7ನೇ ತರಗತಿಯವರೆಗಿನ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದ ಈ ಶಾಲೆ ಎಲ್ಲ ವಿಚಾರಗಳಲ್ಲೂ ವ್ಯವಸ್ಥಿತವಾಗಿತ್ತು.
ಈ ಶಾಲೆಯಲ್ಲಿ ಹಲವು ವರ್ಷ 200ಕ್ಕಿಂತ ಅಧಿಕ ಮಕ್ಕಳ ಹಾಜರಾತಿ ಇರುತ್ತಿತ್ತು. ಆದರೆ 2012ರಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕೊರತೆಯಾದ ಕಾರಣ ಶಾಲೆಯನ್ನು ಮುಚ್ಚಲಾಗಿತ್ತು.
ಮುಂಡಾಜೆ, ಉಜಿರೆ ಹೀಗೆ ಸುತ್ತಮುತ್ತಲಿನ ಪೇಟೆಗಳಲ್ಲಿ ಹಲವು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಸ್ಥಾಪನೆಯಾಗಿರುವ ಕಾರಣ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿ ಶಾಲೆ ಮುಚ್ಚಿದರೂ ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಶಾಲೆಯನ್ನು ಮತ್ತೆ ತೆರೆಯುವ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದಿರುವುದು ವಿಪರ್ಯಾಸ.
ಅನೈಕ್ತಿಕ ಚಟುವಟಿಕೆಗಳ ತಾಣ
ಶಾಲಾ ಪರಿಸರದ ಸುತ್ತ ಗಿಡಗಂಟಿ ಬೆಳೆದಿದ್ದು, ಹಾವು ಮೊದಲಾದ ಜೀವಿಗಳಿಗೆ ಆಶ್ರಯತಾಣ. ಶಾಲಾ ಕೊಠಡಿಗಳು ಕಸ ತುಂಬಿ ತ್ಯಾಜ್ಯ ಕೇಂದ್ರಗಳಾಗಿವೆ. ಶೌಚಾಲಯ ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣದಂತಾಗಿದೆ.
ಗ್ರಾಮಸ್ಥರ ಆಕ್ರೋಶ
ಶಾಲೆ ಮುಚ್ಚುವ ಸಮಯದಲ್ಲಿ ಶಾಲೆಯನ್ನು ಉಳಿಸಿಕೊಳ್ಳಲು ಅಥವಾ ದುರಸ್ತಿ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಮತ್ತು ವ್ಯಕ್ತಿಗಳಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಶಾಲೆ ಮುಚ್ಚಿ 8 ವರ್ಷಗಳೇ ಆಗಿವೆ. ಶಾಲೆ ಈ ಸ್ಥಿತಿ ತಲುಪಿದ್ದರೂ ಯಾವುದೇ ಇಲಾಖೆ ಗಮನ ಹರಿಸಿಲ್ಲ ಎಂದು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.