ಸುಳ್ಯ: ಉದ್ಯಮಿ ನವೀನ್ ಗೌಡ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಪತ್ನಿ ಸ್ಪಂದನಾ ಇದೀಗ ನವೀನ್ ತಾಯಿ ಸೇರಿದಂತೆ ನಾಲ್ವರ ವಿರುದ್ಧ ಕಳ್ಳತನದ ಆರೋಪದಡಿ ದೂರು ನೀಡಿದ್ದಾರೆ. ನವೀನ್ ಪತ್ನಿ ಸ್ಪಂದನಾ ಬೆಳ್ಳಾರೆಯ ಕಾವಿನ ಮೂಲೆಯ ತಮ್ಮ ಗಂಡನ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ.
ನಾನು ತವರು ಮನೆಯಿಂದ ಬಂದು ಮನೆಯೊಳಗೆ ಹೋಗಿ ನೋಡಿದಾಗ ಮನೆಯ ಲಾಕರ್ ಬಾಗಿಲು ತೆರೆದಿದ್ದು ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿದ್ದವು. ವಜ್ರದ ಹಾರ,ನೆಕ್ಲಸ್,ಉಂಗುರ, ಕಿವಿಯ ಓಲೆಗಳು, ಕರಿಮಣಿ ತಾಳಿ ಚೈನು ಹಾಗೂ ಇತರ ಚಿನ್ನಾಭರಣಗಳು ಮತ್ತು ರಶೀದಿಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಚಿನ್ನಾಭರಣಗಳನ್ನು ತನ್ನ ಅತ್ತೆ ಅಂದರೆ ನವೀನ್ ತಾಯಿ ನೀರಜಾಕ್ಷಿ, ಚಿಕ್ಕ ಅತ್ತೆ ತಾರಾ ಕುಮಾರಿ, ಬಾವ ವಿನ್ಯಾಸ್, ಅವರ ಪತ್ನಿ ಪ್ರಜ್ಞಾ ಎಂಬವರು ಕಳ್ಳತನ ಮಾಡಿರುವುದಾಗಿ ಬಲವಾದ ಸಂಶಯವಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಪಂದನಾ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


