ಬೆಳ್ತಂಗಡಿ : ಈತನನ್ನು ಬಂಧಿಸಲು ನಾಲ್ಕು ರಾಜ್ಯದ ವಿವಿಧ ಪೊಲೀಸ್ ಠಾಣೆಯ ಪೊಲೀಸರು ಹಲವು ವರ್ಷಗಳಿಂದ ರಾತ್ರಿ ಹಗಲು ಹುಡುಕಾಟ ನಡೆಸುತ್ತಿದ್ದರು. ಆದ್ರೂ ಈತ ಮಾತ್ರ ತನ್ನ ಕೃತ್ಯ ನಡೆಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪಲಾಯನ ಮಾಡುತ್ತಿದ್ದ ಕೊನೆಗೂ ಈ ಕುಖ್ಯಾತ ಕ್ರಿಮಿಯನ್ನು ಬೆಳ್ತಂಗಡಿ ಪೊಲೀಸರು ಒಂದು ತಿಂಗಳು ಶ್ರಮಪಟ್ಟು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಕ್ರೈಂ ಹಿಸ್ಟರಿ ನೋಡಿದ್ರೆ ಎಲ್ಲರೂ ಬೆಚ್ಚಿಬೀಳುವುದು ಅಂತೂ ಖಂಡಿತ.
ಉಜಿರೆ ಘಟನೆ:ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಗೆ ಆಗಸ್ಟ್ 12 ರಂದು ಹಗಲು ಹೊತ್ತಿನಲ್ಲಿ ಯಾರು ಇಲ್ಲದ ವೇಳೆ ಹಿಂಬಾಗಿಲಿನ ಮೂಲಕ ನುಗ್ಗಿ 15 ಪವನ್ ಚಿನ್ನಾಭರಣ ಮತ್ತು 20 ಸಾವಿರ ಹಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು. ಇದೀಗ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ ಬೆಳ್ತಂಗಡಿ ಪೊಲೀಸರು.
ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿ ನಿವಾಸಿ ಉಮೇಶ್ ಬಳೆಗಾರ(46) ಎಂಬತನನ್ನು ಮೈಸೂರು ಜಿಲ್ಲೆಯ ಝೂ ಪಾರ್ಕ್ ನಲ್ಲಿ ಸೆ.26 ರಂದು ವಶಕ್ಕೆ ಪಡೆದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಇದೀಗ ಕದ್ದ ಚಿನ್ನಾಭರಣವನ್ನು ಮೈಸೂರು ಎಸ್.ಡಿ.ಜೆ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸೆ.28 ರಂದು(ಇಂದು) ಕಳ್ಳತನ ನಡೆಸಿದ ಉಜಿರೆ ಮನೆಗೆ ಬೆಳ್ತಂಗಡಿ ಪೊಲೀಸರು ಕರೆದುಕೊಂಡು ಹೋಗಿ ಮಹಜರು ನಡೆಸಿದ್ದಾರೆ.
ಆರೋಪಿಯ ಕ್ರೈಂ ಹಿಸ್ಟರಿ ರೋಚಕ:
ಆರೋಪಿ ಉಮೇಶ್ ಬಳೆಗಾರ ಮೂಲತಃ ಆಂಧ್ರಪ್ರದೇಶದವನು. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದು ಮಕ್ಕಳು ಕೂಡ ಕಳ್ಳತನದಲ್ಲಿ ಪರಿಣತಿ ಹೊಂದಿದ್ದಾರೆ. ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ತಮಿಳುನಾಡಿನ ಕನ್ಯಾಕುಮಾರಿಯ ಮಹಿಳೆಯನ್ನು ಎರಡನೇ ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದ್ದ. ಅಂದಿನಿಂದ ಎರಡನೇ ಪತ್ನಿ ಊರಿನಲ್ಲಿ ವಾಸವಾಗುತ್ತಿದ್ದ. ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ತನ್ನ 14 ನೇ ವಯಸ್ಸಿನಲ್ಲಿ ಅಂದರೆ 1994 ರಿಂದ ಕಳ್ಳತನಕ್ಕೆ ಇಳಿದಿದ್ದ ನಟೋರಿಯಸ್ ಉಮೇಶ್ ಬಳೆಗಾರಗೆ ಮಾತಾನಾಡಲು 9 ಭಾಷೆಗಳು ಬರುತ್ತದೆ.
ನಾಲ್ಕು ರಾಜ್ಯದ ನಟೋರಿಸ್ ವಾಂಟೆಡ್ ಕಳ್ಳ: ತಮಿಳುನಾಡು ರಾಜ್ಯದಲ್ಲಿ 14 ಪ್ರಕರಣ, ಕೇರಳ ರಾಜ್ಯದಲ್ಲಿ 10 ಪ್ರಕರಣ , ಆಂದ್ರ ಪ್ರದೇಶ ರಾಜ್ಯದಲ್ಲಿ 5 ಕೇಸ್ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಉಡುಪಿ ,ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿಯಲ್ಲಿ ಪ್ರಕರಣ ಇದೆ. ಸದ್ಯ ಇತ್ತೀಚಿನ ಕೇಸ್ ನಲ್ಲಿ ಆರೋಪಿ ಉಮೇಶ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಮತ್ತು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ತನಿಖೆ ಬಾಕಿ ಇದೆ.
ಉಡುಪಿ ಹಿರಿಯಡ್ಕ ಜೈಲಿನಲ್ಲಿ ಕೊಲೆಯಲ್ಲಿ ಭಾಗಿ:
ಆರೋಪಿ ಕಳ್ಳತನ ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ಹಿರಿಯಡ್ಕ ಸಬ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಾ ಇರುವಾಗ ನಟೋರಿಸ್ ರೌಡಿ ಪಿಟ್ಟಿ ನಾಗೇಶ್ ಸೂಚನೆಯ ಮೇರೆಗೆ 2011 ರ ಜನವರಿ 14 ರಂದು ಸಹಕೈದಿ ನಟೋರಿಯಸ್ ರೌಡಿ ಶೀಟರ್ ವಿನೋದ್ ಶೆಟ್ಟಿಗಾರ್ ಎಂಬತನನ್ನು ಹೊರಗಿನಿಂದ ಕೇಕ್ ನೊಳಹೆ ಬಂದಿದ್ದ ಆಯುಧದಿಂದ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈತನು ಕೂಡ ಆರೋಪಿಯಾಗಿದ್ದಾನೆ.
ನ್ಯಾಯಾಲಯಕ್ಕೆ ಹಾಜರಾಗದೇ ಎಸ್ಕೇಪ್ ಆಗುತ್ತಿದ್ದ ಆರೋಪ
ಹಲವು ಭಾರಿ ರಾಜ್ಯದ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ರಾಜ್ಯದ ವಿವಿಧ ಜೈಲಿನಲ್ಲಿದ್ದ. ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರಾಗುತ್ತಿರಲ್ಲಿಲ್ಲ ಇದಕ್ಕಾಗಿ ಈತನ ಮೇಲೆ ನಾಲ್ಕು ರಾಜ್ಯದ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗುತ್ತಿತ್ತು.ಇದಕ್ಕಾಗಿ ನಾಲ್ಕು ರಾಜ್ಯದ ಪೊಲೀಸರು ರಾತ್ರಿ ಹಗಲು ಹುಡುಕಾಟ ನಡೆಸುತ್ತಿದ್ದರು.
ಕಳ್ಳತನಕ್ಕೆ ಹೋಗುವಾಗ ಪತ್ನಿ ಮಕ್ಕಳು ಸಾಥ್;
ತನ್ನ ಕಳ್ಳತನ ಕೃತ್ಯಕ್ಕೆ ಹೋಗುವಾಗ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಸ್ಥಳೀಯ ವಸತಿ ಗೃಹ ಅಥವಾ ಲಾಡ್ಜ್ ಪಡೆದುಕೊಂಡು ಎರಡು ಮೂರು ದಿನ ಉಳಿದುಕೊಳ್ಳುತ್ತಿದ್ದರು . ಅವರನ್ನು ಬಿಟ್ಟು ಈತ ಹಗಲಿನಲ್ಲಿ ಒಬ್ಬಂಟಿಯಾಗಿ ಹೋಗಿ ಕಳ್ಳತನ ಮಾಡಿ ಬಂದು ನಂತರ ಬೇರೆ ಜಿಲ್ಲೆಗೆ ಹೋಗಿ ರೂಂ ಮಾಡಿಕೊಂಡು ಇರುತ್ತಿದ್ದ.
ಆರೋಪಿ ಹೆಡೆಮುರಿ ಕಟ್ಟಲು ಕಾರ್ಯಾಚರಣೆ:ಕಳ್ಳತನ ನಡೆದ ದಿನ ಮನೆಯಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನಂತರ ಸಿಸಿಕ್ಯಾಮರ ಮತ್ತು ಟೆಕ್ನಿಕಲ್ ಸಾಕ್ಷಾಧಾರದಲ್ಲಿ ತನಿಖೆಗಿಳಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡದ ಸಿಬ್ಬಂದಿಗಳು ಬೆಂಗಳೂರು ,ಮೈಸೂರು ಸೇರಿ ವಿವಿಧೆಡೆ ರಾತ್ರಿ ಹಗಲು ಸಂಚರಿಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸಿತ್ತು ಕೊನೆಗೂ ಒಂದು ತಿಂಗಳ ಕಾರ್ಯಾಚರಣೆ ಬಳಿಕ ಆರೋಪಿ ಕುಖ್ಯಾತ ಕಳ್ಳ ಉಮೇಶ್ ಬಳೆಗಾರ ನನ್ನು ಮೈಸೂರು ಝೂ ಪಾರ್ಕ್ ನಲ್ಲಿ ಬಲೆಗೆ ಕೆಡವಿದ್ದಾರೆ.
ದರೋಡೆ ಹಾಗೂ ಕಳ್ಳತನಕ್ಕೆ ಸ್ಕೇಚ್:ಇನ್ನೂ ಬೆಳ್ತಂಗಡಿ ಪೊಲೀಸರ ವಿಚಾರಣೆ ವೇಳೆ ಈ ವಾರದಲ್ಲಿ ಆರೋಪಿ ಉಮೇಶ್ ಬಳೆಗಾರ ಉಜಿರೆಯ ಒಂದು ದೊಡ್ಡ ಮನೆಯನ್ನು ಗುರುತಿಸಿ ದರೋಡೆಗೆ ಸಂಚು ರೂಪಿಸಿದ್ದ ಬಳಿಕ ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶವನ್ನು ಗುರುತಿಸಿ ಕಳ್ಳತನ ಮಾಡಲು ರೂಪುರೇಷೆ ಸಿದ್ದಪಡಿಸಿದ್ದ ಅಘಾತಕಾರಿ ಮಾಹಿತಿ ಬಾಯಿಬಿಟ್ಟಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಧನರಾಜ್ , ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ,ಎಎಸ್ಐ ತಿಲಕ್ ರಾಜ್ ಹಾಗೂ ಸಿಬ್ಬಂದಿ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.