ಮಂಗಳೂರು: ಹೆಸರಿನ ವಿಚಾರದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಕೊನೆಗೂ ಅಧಿಕೃತವಾಗಿ ಬದಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಆದೇಶದ ಮೂಲಕ ಲೇಡಿಹಿಲ್ ವೃತ್ತದ ಹೆಸರನ್ನು ಇಂದು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಬದಲಿಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಮೂಲಕ ನೂತನ ವೃತ್ತದ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಬಿಜೆಪಿ ಪ್ರಮುಖರು ಹಾಗೂ ಬಿಲ್ಲವ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು. ತಿಂಗಳ ಹಿಂದೆ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಮರು ನಾಮಕರಣ ವಿವಾದ ಕರಾವಳಿಯಲ್ಲಿ ಭಾರೀ ಸದ್ದು ಮಾಡಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಭಾರೀ ಗುದ್ದಾಟಕ್ಕೂ ಈ ವೃತ್ತದ ಮರುನಾಮಕರಣ ವಿವಾದ ಕಾರಣವಾಗಿತ್ತು. ಇದೀಗ ಕೊನೆಗೂ ರಾಜ್ಯ ಸರ್ಕಾರವೇ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಹೆಸರು ಬದಲಿಸಿ ಶಿಲನ್ಯಾಸ ನೆರವೇರಿಸಲಾಗಿದೆ.
ಲೇಡಿಹಿಲ್ ಸರ್ಕಲ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂಬ ಒತ್ತಾಯ ಕೆಲ ತಿಂಗಳ ಹಿಂದೆ ಜೋರಾಗಿತ್ತು. ಮಂಗಳೂರಿನ ಲೈಟ್ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರಾಮ್ ಶೆಟ್ಟಿ ಹೆಸರು ನಾಮಕರಣಗೊಂಡ ಬೆನ್ನಲ್ಲೇ ಲೇಡಿಹಿಲ್ ಸರ್ಕಲ್ಗೆ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು. ಹೆಸರು ಬದಲಾವಣೆಯ ವಿಚಾರಕ್ಕೆ ನಮ್ಮ ಸಂಪೂರ್ಣ ವಿರೋಧ ಮತ್ತು ಆಕ್ಷೇಪವಿದೆ ಎಂದಿತ್ತು. ಆದ್ರೆ ಈ ನಡೆ ಹಿಂದೂ ಸಂಘಟನೆಗಳನ್ನ ಕೆರಳಿಸಿದ್ದು, ನಾರಾಯಣ ಗುರುಗಳ ಹೆಸರೇ ಇಡಬೇಕು ಅಂತ ಪಟ್ಟು ಹಿಡಿದಿದ್ದವು.
ಈ ನಡುವೆ ಹಿಂದೂಸಂಘಟನೆ ಕಾರ್ಯಕರ್ತರು ನಾರಾಯಣ ಗುರುಗಳ ಹೆಸರಿನ ಫಲಕ ಹಾಕಿ ಜೈ ಅಂದಿದ್ದರು. ಇನ್ನು ಕೆಲ ಖಾಸಗಿ ಬಸ್ಸುಗಳಲ್ಲೂ ನಾರಾಯಣ ಗುರು ವೃತ್ತ ಅಂತ ಹೆಸರು ಹಾಕಲಾಗಿತ್ತು. ಇದಾದ ಬೆನ್ನಲ್ಲೇ ಈ ವಿವಾದ ಪಾಲಿಕೆ ಅಂಗಳಕ್ಕೆ ಬಂದಿದ್ದು, ನಾರಾಯಣ ಗುರು ಹೆಸರಿಡಲು ಅನೇಕ ಸದಸ್ಯರು ಕೂಡ ಧ್ವನಿ ಎತ್ತಿದ್ದರು. ಆದರೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಲಿಖಿತ ಆಕ್ಷೇಪ ಸಲ್ಲಿಸಿದ ಕಾರಣ ಈ ವಿವಾದ ಮತ್ತಷ್ಟು ಜಟಿಲವಾಗಿತ್ತು. ಹೀಗಾಗಿ ಈ ವಿಚಾರ ನೇರ ರಾಜ್ಯ ಸರ್ಕಾರದ ಅಂಗಳಕ್ಕೆ ತಲುಪಿದೆ. ಈ ನಡುವೆ ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯದ ಲೆಕ್ಕಾಚಾರ ಅರಿತ ಜಿಲ್ಲೆಯ ಬಿಜೆಪಿ ನಾಯಕರ ಮುಖೇನ ಕೊನೆಗೂ ಅಧಿಕೃತವಾಗಿ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರು ವೃತ್ತ ಹೆಸರಿಡಲು ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.