ಬೆಂಗಳೂರು, ಮೇ 06: ಮಾರಕ ಕೊರೊನಾ ವೈರಸ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಜನರಿಗಾಗಿ ಕರ್ನಾಟಕ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಇದ್ದಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು.
ಕಾಂಗ್ರೆಸ್ ನಾಯಕನ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ‘ಸರ್ಕಾರಕ್ಕೆ ನಾವು 50,000 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ ಮಾಡಿದ್ದೆ, ಆದರೆ, ಸರ್ಕಾರ 1610 ಕೋಟಿ ಮಾತ್ರ ನೀಡುತ್ತಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ”ಕೊವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವವರ ನಾಡಿನ ಜನತೆಗೆ ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ಸರ್ಕಾರವೂ ಶಕ್ತಿ ಮೀರಿ ಜನತೆಗೆ ಸ್ಪಂದಿಸುತ್ತಿದೆ. ಈ ಸಮಯದಲ್ಲಿ ನಿಮ್ಮ ರಾಜಕೀಯ ಬದಿಗಿರಿಸಿ ಕೊರೊನಾ ವಿರುದ್ಧ ಹೋರಾಡಲು ಸಹಕರಿಸಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೇರಳದಲ್ಲಿ ಕೊರೊನಾ ಸಂಕಷ್ಟದಿಂದ ಕಷ್ಟ ಪಡುತ್ತಿರುವ ಜನರಿಗಾಗಿ 20,000 ಕೋಟಿ ಘೋಷಿಸಿದೆ ಎಂದು ಹೇಳಿದ್ದ ಮಾತಿಗೆ ”ಕೇರಳ ಊರಿಗೆ ಮುಂಚೆ 20,000 ಕೋಟಿ ಘೋಷಿಸಿ ಮತ್ತೆ ಇದೇ ಹಣದ ಸಲುವಾಗಿ ಕೇಂದ್ರದ ಕದ ತಟ್ಟಿದ ವಿಷಯ ಹಳೆಯದು” ಎಂದು ಹೇಳಿದ್ದಾರೆ.
ಇನ್ನು ಸರ್ಕಾರವನ್ನು ಟೀಕಿಸುವ ಉದ್ದೇಶದಿಂದ ‘ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಹೇಳಿಕೆ ವೈರಲ್ ಆಗುತ್ತಿದೆ.
ಇದೇ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಳೀನ್ ಕುಮಾರ್ ”ಸಿದ್ಧರಾಮಯ್ಯನವರೇ, ಸರ್ಕಾರವನ್ನು ದೂರುವುದೇ ಗುರಿಯಾದಾಗ ಮಾತ್ರ ಇಂತಹ ತಪ್ಪುಗಳಾಗಲು ಸಾಧ್ಯ! ಅಂದಹಾಗೆ ಎಕರೆಗೆ 50 ಲಕ್ಷ ಖರ್ಚು ಮಾಡಿ ಬೆಳೆಯುವ ಹೂವು ಚಿನ್ನದ್ದಾ? ಇದನ್ನು ಕೇಳುವವರಿಗೆ, ನಿಮ್ಮ ನಾಯಕ ರಾಹುಲ್ ಗಾಂಧಿ ಹೇಳಿದ ಆಲೂಗಡ್ಡೆಯಿಂದ ಚಿನ್ನ ತೆಗೆಯುವ ಕೆಲಸ ನೆನಪಾಗುವುದಿಲ್ಲವೇ.?’ ಎಂದು ಪ್ರಶ್ನಿಸಿದ್ದಾರೆ.