ಬೆಂಗಳೂರು: ಭೂಗತ ಲೋಕದಿಂದ ವಿರಮಿಸಿ, ನಂತರ ಜಯ ಕರ್ನಾಟಕ ಎಂಬ ರಾಜಕೀಯೇತರ ಸಾಮಾಜಿಕ ಸಂಘಟನೆ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಎಂಎರ್ ಆರ್ ಗ್ರೂಪ್ ನ ಮಾಲೀಕ ಮುತ್ತಪ್ಪ ರೈ (68) ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರೈ ಕುಟುಂಬದ ಹಿನ್ನಲೆ..!
ನೆಟ್ಟಲ ನಾರಾಯಣ ರೈ ಮತ್ತು ದೇರ್ಲ ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರು ತಾಲೂಕಿನ ಮಾಡವಿನಲ್ಲಿ ಮುತ್ತಪ್ಪ ರೈ ಜನನವಾಯ್ತು. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಮುತ್ತಪ್ಪ ರೈ ನಂತರ ವಿಜಯ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಮುತ್ತಪ್ಪ ರೈ ಅವರು ಕೊಡಗಿನ ಅಳಿಯ
ಕೊಡವ ಸಮುದಾಯದ ಚೌರೀರ ಕುಟುಂಬದ ರೇಖಾ ಅವರೊಂದಿಗೆ ಮುತ್ತಪ್ಪ ರೈ ಪ್ರೇಮ ವಿವಾಹ ವಿವಾಹವಾಗಿದ್ದರು. ಮುತ್ತಪ್ಪ ರೈ ಅವರು ಪುತ್ತೂರಿನಲ್ಲಿ ಬ್ಯಾಂಕ್ನಲ್ಲಿ ಕೆಲಸದಲ್ಲಿದ್ದಾಗ ಮಡಿಕೇರಿಗೆ ಕೆಲಸನಿಮಿತ್ತ ಭೇಟಿ ಕೊಡುತ್ತಿದ್ದರು. ಆಗ ಮುತ್ತಪ್ಪ ರೈ ಹಾಗೂ ರೇಖಾ ನಡುವೆ ಪ್ರೀತಿ ಮೂಡಿ ಪ್ರೇಮ ವಿವಾಹ ಮಾಡಿಕೊಂಡಿದ್ದರು. ರಾಖಿ ಮತ್ತು ರಿಕ್ಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಬೋನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. 40 ವರ್ಷಗಳ ದಾಂಪತ್ಯ ಜೀವನದಿಂದ ರೇಖಾ ರೈ 28-04-2013 ರಂದು ಮುತ್ತಪ್ಪ ರೈ ಅವರನ್ನು ಬಿಟ್ಟು ಹೋದ್ರು.
ರೈಯವರ ಎರಡನೇ ಮದುವೆ
ರೇಖಾ ನಿಧನದ ನಂತರ ಮುತ್ತಪ್ಪ ರೈ ವಿವಾಹವಾಗಿರುವುದು ಅನುರಾಧ ಎಂಬ ವಿವಾಹಿತ ಮಹಿಳೆಯನ್ನು. ಸಕಲೇಶಪುರ ಮೂಲದ ಇವರು ಬಹಳ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದರು. ಅನುರಾಧ ಕೂಡ ಉದ್ಯಮಿ. ಮುತ್ತಪ್ಪ ರೈ ಅವರಿಗೆ ಹಳೆಯ ಪರಿಚಯ ಎನ್ನಲಾಗಿದೆ. ಸಾಕಷ್ಟು ವರ್ಷಗಳಿಂದ ಇವರಿಬ್ಬರು ಸ್ನೇಹಿತರು ಕೂಡಾ ಹೌದು. ಅನುರಾಧ ರೈ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರ ಮೊದಲ ಪತಿ ಅನಾರೋಗ್ಯದಿಂದ ನಿಧನರಾಗಿದ್ದರು.
ಕ್ಯಾನ್ಸರ್ ಇದೆ ಎಂದು ತಿಳಿದ ನಂತರ ಮುತ್ತಪ್ಪ ರೈ ತನ್ನ ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿಯನ್ನು, ತಮ್ಮ ಕುಟುಂಬದವರು ಹಾಗೂ ಕೆಲ ಬೆಂಬಲಿಗರ ಹೆಸರಿನಲ್ಲಿ ವಿಲ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕೊನೆಗೂ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮುತ್ತಪ್ಪ ರೈ ಮಣಿದಿದ್ದಾರೆ.