ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟ ಶ್ರೀ ಅಮೃತೇಶ್ವರಿ ದೇವಾಲಯದಲ್ಲಿ ನಿನ್ನೆ ಮುಸ್ಲಿಂ ಮಹಿಳೆಯೊಬ್ಬರು ಶ್ರದ್ಧಾ ಭಕ್ತಿಯಿಂದ ತುಲಾಭಾರ ಸೇವೆ ನಡೆಸುವ ಮೂಲಕ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ದೇವಸ್ಥಾನಕ್ಕೆ ಬಂದಿದ್ದ ಕೋಟತಟ್ಟು ಪಡುಕರೆ ನಿವಾಸಿ ಎಂದು ಹೇಳಲಾದ ಮಹಿಳೆಯೊಬ್ಬರು ಸಂತಾನಭಾಗ್ಯಕ್ಕಾಗಿ ಅಮ್ಮನಿಗೆ ಹಲವು ವರ್ಷಗಳ ಹಿಂದೆ ಹರಕೆ ಕಟ್ಟಿಕೊಂಡಿದ್ದರು. ಹರಕೆಯಿಂದ ಗಂಡು ಮಗು ಜನ್ಮವಾಗಿದ್ದರಿಂದ ದೇವಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ಪೂರೈಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ದಿನಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರಗಜ್ಜನ ನೇಮ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಅನಾರೋಗ್ಯ ಪೀಡಿತವಾದ ಮಗುವಿಗೆ ಕೊರಗಜ್ಜ ಅಭಯ ನೀಡಿದ ವಿಡಿಯೋ ಒಂದು ವೈರಲ್ ಆಗಿತ್ತು, ಈಗ ಅದೇ ರೀತಿಯ ಇನ್ನೊಂದು ಘಟನೆ ನಡೆದಿದ್ದು, ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬ ಒಂದು ತುಲಾಭಾರ ಸೇವೆ ಮಾಡಿಸುವ ಮೂಲಕ ಹರಕೆ ಸಲ್ಲಿಸಿದೆ.