ಇಂಧೋರ್: ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ ಹೇಳಿರುವಂತೆ ಭಾರತ ಎಂದರೆ ಅದು ಸರ್ವ ಜನಾಂಗದ ಶಾಂತಿಯ ತೋಟ. ವಿಭಿನ್ನ ಹಬ್ಬಗಳನ್ನು ಆಚರಣೆ ಮಾಡುವ ಸುಂದರ ನಾಡು ನಮ್ಮದು. ಕೊರೋನಾ ಭೀತಿಯ ನಡುವೆಯೂ ದೇಶ ಜಗದ್ದೋದ್ಧಾರಕ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ನಾಡಿನಾದ್ಯಂತ ಆಚರಿಸಲಾಯಿತು. ಆದರೆ ಮಧ್ಯಪ್ರದೇಶದ ಮುಸ್ಲಿಂ ಧರ್ಮದ ವ್ಯಕ್ತಿಯೊಬ್ಬರು 12 ವರ್ಷಗಳ ಹಿಂದೆ ಶ್ರೀಕೃಷ್ಣಜನ್ಮಾಷ್ಟಮಿಯಂದು ಮಾಡಿದ ಒಂದು ಕೆಲಸ ಇದೀಗ ಸುದ್ದಿಯಾಗಿದೆ.

ಮಧ್ಯಪ್ರದೇಶದ ಅಝೀಜ್ ಖಾನ್ ಅವರ 12 ವರ್ಷದ ಮಗನ ಹೆಸರು ಕೃಷ್ಣ ಎಂದರೆ ನೀವು ನಂಬಲೇಬೇಕು. ಹೌದು, 2008ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಅಝೀಜ್ ಖಾನ್ ರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದು ನಾಡೆಲ್ಲ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಕೃಷ್ಣ ಹುಟ್ಟಿದ ದಿನದಂದೇ ಗಂಡು ಮಗು ಹುಟ್ಟಿದ ಕಾರಣ ಅಝೀಜ್ ಖಾನ್ ಮಗುವಿಗೆ ಕೃಷ್ಣ ಎಂದು ಹೆಸರಿಟ್ಟರು.

ಅಝೀಜ್ ಖಾನ್ ರ ಮಗುವಿಗೆ ಹಿಂದೂ ದೇವರ ಹೆಸರಿಡುವುದಕ್ಕೆ ಅವರ ಕುಟುಂಬದವರು ತೀವ್ರವಾಗಿ ವಿರೋಧಿಸಿದರು. ಸ್ವತಃ ಅಝೀಜ್ ಖಾನ್ ರ ತಾಯಿಯೇ ಆ ಹೆಸರು ಬೇಡ, ಕಾಫಿರ್ ಎಂದು ನಾಮಕರಣ ಮಾಡೋಣ ಎಂದಿದ್ದರಂತೆ. ಆದರೆ ತಂದೆಯಾಗಿ ನನಗೆ ಮಗನಿಗೆ ಯಾವುದೇ ಹೆಸರನ್ನಾದರೂ ಇಡುವ ಸಂಪೂರ್ಣ ಹಕ್ಕು ಇದೆ. ನಾನು ಕೃಷ್ಣ ಎಂಬ ಹೆಸರನ್ನು ಇವತ್ತಿನವರೆಗೆ ಬದಲಿಸಲಿಲ್ಲ ಎಂದು ಅಝೀಜ್ ತಿಳಿಸಿದ್ದಾರೆ.