ಕಡಬ: ಅಯ್ಯಪ್ಪ ಮಾಲಾಧಾರಿಗಳ ವಾಹನ ಕೆಟ್ಟು ಹೋಗಿದ್ದರಿಂದ ಅವರಿಗೆ ಮಸೀದಿಯಲ್ಲಿ ಮೂಲ ಸೌಕರ್ಯ ಒದಗಿಸಿ ಮುಸ್ಲಿಂ ಯುವಕರು ಸೌಹಾರ್ದತೆ ಮೆರೆದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.
ಹೈದರಾಬಾದಿನಿಂದ ಅಯ್ಯಪ್ಪ ವೃತಧಾರಿಗಳ ತಂಡವೊದು ಶಬರಿಮಲೆಗೆ ಹೊರಟಿತ್ತು. ತಂಡ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ದರ್ಶನ ಮುಗಿಸಿ ಶಬರಿಮಲೆ ಕಡೆಗೆ ಹೊರಟಿತ್ತು. ಕಾಣಿಯೂರು ಮೂಲಕ ಪುತ್ತೂರು ಕಡೆ ಬರುತ್ತಿದ್ದಾಗ ಅವರ ವಾಹನ ಮಧ್ಯರಾತ್ರಿ 1ರ ಸುಮಾರಿಗೆ ಸವಣೂರು- ಚಾಪಳ್ಳ ಮಸೀದಿಯ ಬಳಿ ತಾಂತ್ರಿಕ ಕಾರಣದಿಂದ ಕೆಟ್ಟಿದೆ.
ರಾತ್ರಿ ಕೆಟ್ಟು ಹೋದ ವಾಹನದ ಬಳಿಯೇ ಅಯ್ಯಪ್ಪ ವೃತಧಾರಿಗಳು ಮುಂಜಾನೆಯವರೆಗೆ ಸಮಯ ಕಳೆದಿದ್ದಾರೆ. ಮುಂಜಾನೆ ನಮಾಜ್ ಗಾಗಿ ಬಂದ ಮುಸ್ಲಿಂ ಸಮುದಾಯದ ಯುವಕರು ವಾಹನದಲ್ಲಿದ್ದವರು ಪರದಾಡುವುದನ್ನು ಕಂಡು ಏನು ಎಂದು ವಿಚಾರಿಸಿದ್ದಾರೆ. ಬಳಿಕ ನಮಾಜ್ ಮುಗಿಸಿ ಬಂದ ಯುವಕರು ಅವರಿಗೆ ನೆರವಿಗೆ ಧಾವಿಸಿ ಮಸೀದಿ ಮತ್ತು ಪಂಚಾಯತ್ ನ ಬಾತ್ ರೂಂಗಳಲ್ಲಿ ನಿತ್ಯ ಕರ್ಮಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಅಲ್ಲದೆ ಮೊಬೈಲ್ ಚಾರ್ಜ್ ಮಾಡಲು ಮಸೀದಿಯಲ್ಲಿ ಅವಕಾಶ ಕೊಟ್ಟು ,ವಾಹನ ರಿಪೇರಿಗೆ ಮೆಕ್ಯಾನಿಕ್ ನನ್ನು ಕರೆಸಿ ವಾಹನ ಸರಿಪಡಿಸಿ ಕಳುಹಿಸಿಕೊಟ್ಟಿದ್ದಾರೆ.
ಸವಣೂರು ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್,ಬಿ.ಎಂ.ಮಹಮ್ಮದ್, ರಫೀಕ್ ಹಾಜಿ ಆರ್ತಿಕೆರೆ,ಇಕ್ಬಾಲ್ ಕೆನರಾ,ಕರೀಂ ಸಮಹಾದಿ,ಜಗನ್ನಾಥ ಅಲ್ಲದೆ ಸ್ಥಳೀಯ ಅಯ್ಯಪ್ಪ ಮಾಲಾಧಾರಿ ಸ್ವಾಮಿ , ಅನ್ಯಾಡಿಯ ಮೆಕ್ಯಾನಿಕ್ ಹಿಂದೂ ಸಹೋದರರೊಬ್ಬರು ಸಹಕರಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ ಅಂದ್ರೆ ಬರೀ ಕೋಮು ಗಲಭೆ ಅಂತಾ ಹಣೆಪಟ್ಟಿ ಕಟ್ಟುವ ಹಲವರಿಗೆ ಇದು ಕೋಮು ಸೌಹಾರ್ದತೆಯ ಜಿಲ್ಲೆ ಅನ್ನೋದನ್ನು ತೋರಿಸಿ ಕೊಟ್ಟಿದೆ ಈ ಘಟನೆ. ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂರ ನಡುವೆ ಇಂದಿಗೂ ಇಂತಹ ಸೌಹಾರ್ದತೆ ಇದ್ದರೂ ಅದು ಬೆಳಕಿಗೆ ಬಾರದೇ ಇರೋದು ದುರಂತ. ಇಂತಹ ಕೋಮು ಸೌಹಾರ್ದತೆ ಸದಾ ಜಿಲ್ಲೆಯಲ್ಲಿ ಹೀಗೆ ನೆಲೆಸಿರಲಿ.