ಧಾರವಾಡ: ಬಸವ ಕಲ್ಯಾಣವೆಂದಾಗ ನೆನಪಿಗೆ ಬರುವಂತದ್ದು ಅನುಭವ ಮಂಟಪ. ನಿಜಾಮನ ಕಾಲದಲ್ಲಿ ಅತಿಕ್ರಮಣ ಮಾಡಿ, ಅನುಭವ ಮಂಟಪವನ್ನು ಪೀರ್ ಪಾಷಾ ದರ್ಗಾ ಮಾಡಲಾಗಿದೆ. ಇದೀಗ ಮುಸ್ಲಿಂ ಸಮಾಜ ಹಠ ಮಾಡದೇ ಅನುಭವ ಮಂಟಪವನ್ನು ಬಿಟ್ಟು ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ನಿಜಾಮನ ಕಾಲದಲ್ಲಿ ಅನುಭವ ಮಂಟಪವನ್ನು ಅತಿಕ್ರಮಣ ಮಾಡಲಾಗಿತ್ತು. ಅದಕ್ಕೆ ದಾಖಲೆಗಳಿವೆ. ಹಿಂದೂ ಧರ್ಮದ ನಿರ್ಲಕ್ಷ್ಯದಿಂದ ಅನುಭವ ಮಂಟಪ ಇನ್ನೊಬ್ಬರ ಪಾಲಾಗಿದೆ. ಸರ್ಕಾರ ಅದನ್ನು ವಾಪಸ್ ಪಡೆದುಕೊಳ್ಳಬೇಕು. ಸರ್ಕಾರ ಬಸವಕಲ್ಯಾಣದಲ್ಲಿ ಬೇರೆ ಕಡೆ ಅನುಭವ ಮಂಟಪ ಮಾಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಈಗಿರುವ ಮೂಲ ಸ್ಥಾನ ಅದಾಗಿದ್ದು, ಭಕ್ತಿಯ ಸ್ಥಳವೂ ಆಗಿದೆ. ಮುಸ್ಲಿಂ ಸಮಾಜ ಅದನ್ನು ಶಾಂತ ರೀತಿಯಿಂದ ಬಿಟ್ಟುಕೊಡಬೇಕು. ಇಲ್ಲ ಎಂದರೆ ಗಲಭೆಗಳು ಪ್ರಾರಂಭವಾಗಬಹುದು ಎಂದು ಹೇಳಿದರು.
ವೀರಶೈವ ಹಾಗೂ ಲಿಂಗಾಯತ ಪ್ರತಿನಿಧಿಗಳು ಕುರಿತು ಮಾತಾಡಬೇಕು. ಜೂನ್ 12 ರಂದು ನಮ್ಮ ನಡೆ ಬಸವಕಲ್ಯಾಣದ ಕಡೆ ಎಂಬ ಕರೆ ನೀಡಲಾಗಿದ್ದು, ಬಹಳಷ್ಟು ಜನ ಸಾಧು, ಸಂತರು ಅಲ್ಲಿಗೆ ಬರುತ್ತಿದ್ದಾರೆ.. ಅದಕ್ಕೆ ನಾವೂ ಬೆಂಬಲ ಕೊಡಲಿದ್ದೇವೆ ಎಂದರು.