ಮಂಗಳೂರಿನಲ್ಲಿ ಯುವಕನ ಕೊಲೆಗೆ ಯತ್ನ ನಡೆದಿದೆ. ರೌಡಿಗಳಿಗೆ ಮನೆ ನೀಡಬೇಡಿ ಎಂದು ಹೇಳಿದ್ದಕ್ಕೆ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ನಡೆದಿದೆ. ನೆತ್ತಿಲಪದವು ನಿವಾಸಿ ಮನ್ಸೂರ್(40) ಹಲ್ಲೆಗೆ ಒಳಗಾದವರು. ಉಳ್ಳಾಲ ಕೋಟೆಪುರ ನಿವಾಸಿ ನಮೀರ್ ಹಂಝ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ನಮೀರ್ ಹಂಝ ತನ್ನ ಸಹೋದರನಿಗೆ ಬಾಡಿಗೆ ಮನೆಗೆ ಕೊಡಿಸಲೆಂದು ನೆತ್ತಿಲಪದವು ಬಳಿಯಿರುವ ಮನ್ಸೂರ್ ಸಂಬಂಧಿಕರಿಗೆ ಸೇರಿದ ಮನೆಗೆ ಬಂದಿದ್ದ. ಆದರೆ ಅವರಿಗೆ ಬಾಡಿಗೆಗೆ ಮನೆ ನೀಡುವುದಕ್ಕೆ ಮನ್ಸೂರ್ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ರೌಡಿಗಳಿಗೆ ಮನೆ ನೀಡದಂತೆ ಮನೆಯವರಿಗೆ ಹೇಳಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಮನ್ಸೂರ್ ಹಾಗೂ ನಮೀರ್ ಹಂಝ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೂ ನಡೆದಿದೆ.
ಇದೇ ದ್ವೇಷದಲ್ಲಿ ನಮೀರ್ ಕತ್ತಿಯಿಂದ ಮನ್ಸೂರ್ ಕೈಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.