ರಾಮನಗರ: ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮ ಪಂಚಾಯತಿಗೆ ಸೇರುವ ಬಿ.ವಿ.ಪಾಳ್ಯ ಗ್ರಾಮದಲ್ಲಿ ಅತ್ತೆ-ಸೊಸೆ ಚುನಾವಣೆಗೆ ಸ್ಪರ್ಧಿಸಿ ಇಬ್ಬರೂ ವಿಜಯ ಸಾಧಿಸಿದ ಇಂಟರೆಸ್ಟಿಂಗ್ ಘಟನೆ ನಡೆದಿದೆ.
ಅತ್ತೆ ಪಾರ್ವತಮ್ಮ 330 ಮತ ಪಡೆದು, 68 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅದೇ ರೀತಿ ಸೊಸೆಯು 335 ಮತ ಪಡೆದು, 85 ಮತಗಳ ಅಂತರದಿಂದ ಗೆದ್ದು ಬೀಗಿದರು. ಅತ್ತೆ-ಸೊಸೆ ಜೊತೆಯಾಗಿ ಜಯಗಳಿಸಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮ ಪಂಚಾಯತಿಗೆ ಸೇರುವ ಬಿ.ವಿ.ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ಮುಖಂಡರಾಗಿರುವ ಗಿರೀಶ್ಬಾಬು ಅವರ ತಾಯಿ ಪಾರ್ವತಮ್ಮ.ಎ.ಸಿ ಅವರನ್ನು ಸಾಮಾನ್ಯ ಮಹಿಳೆ ವರ್ಗದಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದರೆ, ಅವರ ಸೊಸೆ ಲಕ್ಷ್ಮಿ.ವಿ ಹಿಂದುಳಿದ ವರ್ಗ-ಎ ಯಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿಸುವ ಮೂಲಕ ಹಳ್ಳಿ ಗದ್ದುಗೆ ಗುದ್ದಾಟದಲ್ಲಿ ಗೆದ್ದಿರುವುದು ವಿಶೇಷವೆನಿಸಿದೆ.
ಇತ್ತೀಚಿನ ದಿನಗಳಲ್ಲಿ ಅತ್ತೆ-ಸೊಸೆಯರು ಹೊಂದಾಣಿಕೆ ಮಾಡಿಕೊಂಡು ಮನೆಗಳಲ್ಲಿ ಬಾಳುವುದೇ ಕಷ್ಟವಾಗಿದೆ. ಆದರೆ ಪಾರ್ವತಮ್ಮ ಹಾಗೂ ಲಕ್ಷ್ಮಿಯವರ ಪರಸ್ಪರ ಪ್ರೀತಿ ನೋಡಿರುವ ಗ್ರಾಮದ ಜನರು, ಮತ ನೀಡುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ನೂತನ ಸದಸ್ಯೆ ಪಾರ್ವತಮ್ಮ, ಗ್ರಾಮದ ಜನರೇ ಒಗ್ಗಟ್ಟಾಗಿ ನಮ್ಮಿಬ್ಬರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ್ದಲ್ಲದೇ, ನಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ಗ್ರಾಮದ ಅಭಿವೃದ್ಧಿಗಾಗಿ ಅತ್ತೆ-ಸೊಸೆ ಒಗ್ಗಟ್ಟಾಗಿ ಊರಿನ ಉದ್ಧಾರಕ್ಕಾಗಿ ದುಡಿಯುತ್ತೇವೆ ಎಂದಿದ್ದಾರೆ.