ಉಡುಪಿ : ಕರಾವಳಿ ಕ್ರೈಸ್ತರ ವಿಶೇಷ ಹಬ್ಬ, ಮೇರಿ ಮಾತೆಯ ಜನ್ಮ ದಿನವಾದ ಮೊಂತಿ ಫೆಸ್ತ್ ಹಬ್ಬವನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಇಂದು ಕೋವಿಡ್ ಪ್ರಯುಕ್ತ ಸರಳವಾಗಿ ಆಚರಿಸಲಾಗುತ್ತದೆ.
ಈ ಹಬ್ಬವನ್ನು ಕ್ರೈಸ್ತರು ಹೊಸ ಬೆಳೆಯ ಹಬ್ಬ ಅಥವಾ ತೆನೆಹಬ್ಬವಾಗಿ ಆಚರಿಸುತ್ತಾರೆ. ಕೊರೊನಾ ಕಾರಣದಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಎಲ್ಲ ಚರ್ಚ್ಗಳು ಸರಕಾರ ಸೂಚಿಸಿದ ನಿಯಮಾವಳಿಗಳನ್ನು ಪಾಲಿಸಿಕೊಂಡು ಹಬ್ಬದ ಆಚರಣೆ ನಡೆಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಎಲ್ಲ ಚರ್ಚ್ಗಳ ಧರ್ಮಗುರುಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕವಾಗಿ ಹೂ ಅರ್ಪಣೆ ಸಹಿತ ಎಲ್ಲ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು ಚರ್ಚ್ನ ಒಳಗಡೆ ಮಾತ್ರ ಹೂ ಅರ್ಪಣೆ ಮಾಡುವುದರೊಂದಿಗೆ ಹೊಸ ತೆನೆಯ ಆಶೀರ್ವಚನವನ್ನು ನಡೆಸಲಾಗುತ್ತದೆ. ಚರ್ಚ್ನಲ್ಲಿ ಆಶೀರ್ವಚಿಸಿದ ಹೊಸ ತೆನೆಯನ್ನು ಪ್ರತೀ ಮನೆಗೆ ಧರ್ಮಗುರುಗಳು ಹಂಚಲಿದ್ದಾರೆ. ಅದನ್ನು ಮನೆಗೆ ತಂದು ಪ್ರಾರ್ಥನೆ ಮಾಡುವುದರ ಮೂಲಕ ಹಾಲು ಅಥವಾ ಪಾಯಸದೊಂದಿಗೆ ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ.
ಈ ಹಬ್ಬ ಸಸ್ಯಾಹಾರಿ ಭೋಜನಕ್ಕೆ ಹೆಸರಾಗಿದ್ದು ವಿವಿಧ ಬಗೆಯ ತರಕಾರಿ ಖಾದ್ಯಗಳು ಹಬ್ಬದ ಊಟದಲ್ಲಿ ಇರಲಿವೆ. ಬೆಸ ಸಂಖ್ಯೆಯನ್ನು ಹೊಂದಿಕೊಂಡು ತರಕಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಾಗು ಮೇರಿ ಮಾತೆಯ ಜನ್ಮದಿನದೊಂದಿಗೆ ಕುಟುಂಬ ಸಹಮಿಲನದ ಹಬ್ಬ, ಹೊಸಬೆಳೆಯ ಹಬ್ಬ ಹಾಗೂ ಹೆಣ್ಣು ಮಕ್ಕಳ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ.