ಚಿಕ್ಕಮಗಳೂರು: ಮಹಿಳೆಯೊಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರ ಗ್ರಾಮದಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ತ್ರಿಪುರದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿದಿ ಉಷಾ ಎಂಬುವವರು 2021 ರ ಆಗಸ್ಟ್ ನಲ್ಲಿ ರಾತ್ರಿ ಸಂಘದ ಕೆಲಸ ಮುಗಿಸಿಕೊಂಡು ತ್ರಿಪುರ ಗ್ರಾಮದ ರಸ್ತೆಯಲ್ಲಿ ಒಬ್ಬರೇ ಹೋಗುತ್ತಿರುವಾಗ ಆರೋಪಿ ಮಣಿ ಹಿಂದಿನಿಂದ ಬಂದು ಉಷಾರವರ ಬಾಯಿಯನ್ನು ಗಟ್ಟಿಯಾಗಿ ಅದುಮಿ ಹಿಡಿದು ಎಳೆದಾಡಿ 12 ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆ ನಂತರ ತ್ರಿಪುರ ಗ್ರಾಮದ ಸುತ್ತಮುತ್ತ ಹೆಣ್ಣು ಮಕ್ಕಳು ಓಡಾಡಲು ಭಯಪಡುತ್ತಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಒಂದು ವರ್ಷ ಐದು ತಿಂಗಳಿಂದ ಸತತ ಪ್ರಯತ್ನದಿಂದ ಆರೋಪಿ ತ್ರಿಪುರದ ಮಣಿ ಎಂಬುವವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂಡಿಗೆರೆಯ ವೃತ್ತ ನಿರೀಕ್ಷಕರು ಸೋಮಶೇಖರ್, ಸೋಮೇಗೌಡ, ಸಿಬ್ಬಂದಿ ಗಿರೀಶ್, ಮನು, ಜಗದೀಶ್ ಭಾಗವಹಿಸಿದ್ದರು.