ಬಂಟ್ವಾಳ: ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ ದೇಶ ಬಲಿಷ್ಠವಾಗಿದ್ಸು, ಜನರು ಯಾವುದೇ ಚಿಂತೆಯಿಲ್ಲದೆ ನೆಮ್ಮದಿಯಿಂದ ಜೀವನ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾಯಿತು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಪಂಜಿಕಲ್ಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ರೂ.14 ಕೋಟಿಗೂ ಮಿಕ್ಕಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಕಾರ್ಯಕರ್ತರ ಸಮಾವೇಶದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ಆಡಳಿತಕ್ಕಾಗಿ ಹಿಂದೂ ಧರ್ಮದ ಉಳಿವಿಗಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಅವರು ತಿಳಿಸಿದರು.
ಪಂಜಿಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ಗೊಂದಲಗಳಿದ್ದರೆ ಬದಿಗಿಟ್ಟು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡಿ. ನಿಷ್ಠೆಯಿಂದ ಜೊತೆಯಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು. ಪಕ್ಷವೇ ಮುಖ್ಯ ಹೊರತು ವ್ಯಕ್ತಿಯಲ್ಲ, ಅನಿಟ್ಟಿನಲ್ಲಿ ಜತೆಯಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಕೇವಲ ಭರವಸೆ ನೀಡಿದ್ದು ಬಿಟ್ಟರೆ ನೀಡಿದ್ದು ಏನು? ಎಂದು ಪ್ರಶ್ನಿಸಿದ ಅವರು ಬಿಜೆಪಿ ನುಡಿದಂತೆ ನಡೆದಿದೆ, ನೀಡಿದ ಎಲ್ಲಾ ಭರವಸೆಗಳನ್ನು ಪ್ರಾಮಾಣಿಕವಾಗಿ ನೀಡಿದೆ ಎಂದು ಅವರು ತಿಳಿಸಿದರು. ನಾವು ಕೊಟ್ಟ ಜನರ ಪರವಾದ ಯೋಜನೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳಿ ಪ್ರಚಾರ ಪಡೆಯುತ್ತಿದೆ ಎಂದು ಅವರು ಲೇವಡಿಮಾಡಿದರು.ಜಲಜೀನ್ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂ ಗಳ ಅಭಿವೃದ್ಧಿ, ಸಾವಿರಾರು ಮನೆ ನಿವೇಶನ ಮಂಜೂರು ಜೊತೆ 2 ಸಾವಿರ ಕೋಟಿ ರೂ ಅನುದಾನಗಳ ಮೂಲಕ ಅಭಿವೃದ್ಧಿ ಮಾಡಿದ್ದೇವೆ. ಆದರೆ ವಿರೋಧ ಪಕ್ಷದವರು ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದೆ ನಾನು ಮಾಡಿದ್ದು ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ.
ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ನಾನು ನುಡಿದಂತೆ , ಕಳೆದ ನಾಲ್ಕು ವರ್ಷ ಐದು ತಿಂಗಳಿನಲ್ಲಿ ರಾಜ ಧರ್ಮದಲ್ಲಿ ನ್ಯಾಯಯುತವಾಗಿ ಶಾಸಕನ ಕರ್ತವ್ಯ ಮಾಡಿದ್ದೇನೆ ಎಂದು ಅವರು ತಿಳಿಸಿದರು. ಅಭಿವೃದ್ಧಿ ಎಂಬುದು ನಿರಂತರವಾಗಿ ನಡೆಯುವ ಪ್ರಕ್ರಿಯೆ, ನಾನು ಶಾಸಕನಾಗಿ ಕರ್ತವ್ಯ ಎಂಬ ನಿಟ್ಟಿನಲ್ಲಿ ಅಭಿವೃದ್ಧಿಯನ್ನು ಮಾಡಿದ್ದೇನೆ. ಶಾಸಕನಾಗುವ ಮೊದಲು ಕೂಡ ನಾನು ಜನರ ಜೊತೆ ನಿರಂತರವಾಗಿ ಒಡನಾಟ ಹೊಂದಿದ್ದೇನೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು,ಮಾತನಾಡಿ ಬಂಟ್ವಾಳದಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸಿದರೆ, ಹಿಂದೂ ಸಮಾಜ ಗೆದ್ದಂತೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಟ್ಟಾಗಿ ,ಒಗ್ಗಟ್ಟಿನಿಂದ ಕೆಲಸ ಮಾಡುವ ಎಂದು ಅವರು ಮನವಿ ಮಾಡಿದರು. ಶಾಸಕರು ಮಾಡಿದ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳ , ಯೋಜನೆಗಳ ಬಗ್ಗೆ ಪಂಜಿಕಲ್ಲು ಗ್ರಾಮದ ಪ್ರತಿ ಮನೆಗೆ ತಿಳಿಸುವ ಕೆಲಸ ಮಾಡುವುದರ ಮೂಲಕ, ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಯಶ್ರೀ ಪಟ್ರಾಡಿ, ಗ್ರಾ.ಪಂ.ಸದಸ್ಯ ರಾದ ಹರೀಶ್ ಪೂಜಾರಿ ತಾಕೋಡೆ, ಬಾಲಕೃಷ್ಣ ಪೂಜಾರಿ, ಮೋಹನ್ ದಾಸ್ , ಪೂವಪ್ಪ ಮೆಂಡನ್, ಚಿತ್ರಾಕ್ಷಿ, ರೂಪ, ನಳಿನಿ, ಚಂದ್ರಾವತಿ ಶೆಟ್ಟಿ, ಶೋಭಾ, ಗೋಪಾಲ ಕುಲಾಲ್ ಮಜಲೊಡಿ, ಚಿದಾನಂದ ಕುಲಾಲ್, ಸುಜಾತ, ಮಂಡಲದಕೋಶಾಧಿಕಾರಿ ಪ್ರಕಾಶ್ ಅಂಚನ್ , ಪಂಜಿಕಲ್ಲು ಶಕ್ತಿಕೇಂದ್ರದ ಸಂಚಾಲಕ ಲಕ್ಷೀನಾರಾಯಣ, ಮೂಡನಡುಗೋಡು ಶಕ್ತಿಕೇಂದ್ರದ ಸಂಚಾಲಕ ಹರೀಶ್ ,ಬುಡೋಳಿ ಶಕ್ತಿ ಕೇಂದ್ರದ ಸಂಚಾಲಕ ಶಿವರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ರುಕ್ಮಯ ಪೂಜಾರಿ, ಪ್ರವೀಣ್ ಪೂಜಾರಿ, ಶರ್ಮಿತ್ ಜೈನ್ , ಕೆ.ಎನ್.ಶೇಖರ್, ವಿಕೇಶ್ ಬಾಲೇಶ್ವರ ಮತ್ತಿತರರು ಉಪಸ್ಥಿತರಿದ್ದರು.