Sunday, June 29, 2025
Homeಕರಾವಳಿಶಾಸಕ ಹರೀಶ್ ಪೂಂಜ ತಾಲೂಕನ್ನು ಅಧ್ಯಯನಾತ್ಮಕ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದಾರೆ; ಎಂಎಲ್‌ಸಿ ಪ್ರತಾಪಸಿಂಹ ನಾಯಕ್

ಶಾಸಕ ಹರೀಶ್ ಪೂಂಜ ತಾಲೂಕನ್ನು ಅಧ್ಯಯನಾತ್ಮಕ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದಾರೆ; ಎಂಎಲ್‌ಸಿ ಪ್ರತಾಪಸಿಂಹ ನಾಯಕ್

spot_img
- Advertisement -
- Advertisement -

ಬೆಳ್ತಂಗಡಿ; ಶಾಸಕರಾಗಿ ಹರೀಶ್ ಪೂಂಜ ಅಧಿಕಾರಕ್ಕೆ ಬಂದಾಗಿನಿಂದ ನಿಷ್ಪಕ್ಷಪಾತವಾಗಿ ಪ್ರತೀ 241 ಬೂತ್ ಮಟ್ಟದಲ್ಲೂ ಅಭಿವೃದ್ಧಿ ಆಗಿದೆ. ತಾಲೂಕನ್ನು ಅಧ್ಯಯನಾತ್ಮಕ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದಾರೆ. ತಾಲೂಕಿಗೆ ಅಪ್ಪಳಿಸಿದ‌ ನೆರೆ ಮತ್ತು ಕೋವಿಡ್‌ನ ಎರಡೂ ಅಲೆಯ ಹೊಡೆತದ ಮಧ್ಯೆಯೂ ಸರಕಾರದ ಅನುದಾನ ಬಳಸಿ, ತಾಲೂಕಿನ‌ ಜನತೆ ಮತ್ತು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಿಸುವ ಮೂಲಕ ಟೀಕಿಸುವವರಿಗೆ ಅಭಿವೃದ್ಧಿಯ ಮೂಲಕವೇ ಉತ್ತರ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲದ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂದಿಗ್ದ ಪರಿಸ್ಥಿತಿಯಲ್ಲೂ ಕೂಡ ತಾಲೂಕಿನಲ್ಲಿಅಭಿವೃದ್ಧಿಯ ವೇಗ ಕಡಿಮೆಯಾಗಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಜೊತೆ ಸೇರಿ‌ ಇಲ್ಲಿನ‌ ಯುವ ಶಾಸಕರು ‌ಪರಿಸ್ಥಿತಿ ಎದುರಿಸಿದ‌ ರೀತಿ‌ ಎಲ್ಲರಿಗೂ ಮಾದರಿ.

ಚಾರ್ಮಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆಯಿಂದ ತೊಂದರೆಯಾದಾಗ ಶ್ರೀ‌ಕ್ಷೇತ್ರ ಧರ್ಮಸ್ಥಳ ಹೆಗ್ಗಡೆಯವರನ್ನು, ಉಜಿರೆಯ ಬದುಕು ಕಟ್ಟೋಣ ಬನ್ನಿ‌ ತಂಡದವರನ್ನೂ ಸೇರಿದಂತೆ ಸ್ವಯಂ ಸೇವಾ ಸಂಘದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಅನುದಾನ, ಸ್ಥಳೀಯ ಸಂಪನ್ಮೂಲ ಬಳಸಿ ಅಲ್ಲಿನನವರ ಮನೆಗಳ ಪುನರ್ ನಿರ್ಮಾಣ, ಕೃಷಿಯ ಮರುಸ್ಥಾಪನೆ ದೃಷ್ಟಿಯಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ.‌ ಅವರ ಈ ಕಾರ್ಯವನ್ನು ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಶಾಸಕರು ತಾಲೂಕಿನಲ್ಲಿ ಅನುಷ್ಟಾನಿಸಿದ ಯೋಜನೆಗಳ ವ್ಯಾಪ್ತಿಯನ್ನು ನೋಡಿದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆಗೆ ಪರ್ಯಾಯವಾಗಿ ನೀರಿನ ಯೋಜನೆ ಮಾಡುವ ಉದ್ದೇಶದಿಂದ ಒಟ್ಟು ಪ್ರಯತ್ನ ಮಾಡಿದರ ಫಲವಾಗಿ ನೀರಾವರಿ ಯೋಜನೆಯ ಇತಿಹಾಸದಲ್ಲೇ ಅಪೂರ್ವವಾದದ್ದು. ತಾಲೂಕಿನಲ್ಲಿ ಆಗಿರುವ ಕಿಂಡಿ‌ ಅಣೆಕಟ್ಟುಗಳು, ಜಿಲ್ಲೆಯ ಇತಿಹಾಸದಲ್ಲೇ ಮೊದಲ‌ ಬಾರಿಗೆ ಮಂಜೂರಾಗಿರುವ ಏತ ನೀರಾವರಿ ಯೋಜನೆಯಿಂದ ನೀರಿನ‌ ಅಂತರ್ಜಲ‌ ಮಟ್ಟ ಏರಿಸುವ ಕೆಲಸವಾಗಿದೆ. ತಾಲೂಕಿನಲ್ಲಿ 28 ಕಿಂಡಿ ಅಣೆಕಟ್ಟುಗಳು ಪೂರ್ತಿಯಾಗುತ್ತಿದೆ. ಇದರಿಂದ 94 ಕಿ.ಮೀ ನೀರು ನಿಲ್ಲಿಸುವ ಪ್ರಯತ್ನ ಆಗಿದೆ.

ದ.ಕ‌ ಜಿಲ್ಲೆಯ 240 ಕೋಟಿ ರೂ.‌ಅನುದಾನದಲ್ಲಿ ಏತ‌ನೀರಾವರಿ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಮಂಜೂರಾತಿಯಾಗಿದ್ದು, ಇದರಿಂದಾಗಿ 300 ಕಿ.ಮೀ ವ್ಯಾಪ್ತಿಯಲ್ಲಿ ನೀರಿನ‌ ಅಭಾವ‌ ನೀಗಿಸುವ ವಾತಾವರಣ ನಿರ್ಮಾಣವಾಗುತ್ತದೆ.‌ ಅಂತರ್ಜಲ ಮಟ್ಟ ಏರುತ್ತದೆ.‌ ಕೊಳವೆಬಾವಿ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ.‌ ಕೇಂದ್ರ ಸರಕಾರದ ಜಲಜೀವನ್ ಮೆಷಿನ್ ನಡಿ ಪ್ರತೀ ಮನೆಗೆ ನಳ್ಳಿ ನೀರು ಒದಗಿಸುವ ಕನಸಿನ ಯೋಜನೆಯೂ ಪೂರ್ಣವಾಗುತ್ತದೆ ಎಂದರು.

ಈ ಹಿಂದೆ ಸರಕಾರಗಳು ವಿಶ್ವಬ್ಯಾಂಕ್ ನಿಂದ ಸಾಲ ಪಡೆದು ತಂದ ಕೆಲವು ನೀರಾವರಿ ಯೋಜನೆಗಳು ನೀರಿನ‌ಲಭ್ಯತೆ ಇಲ್ಲದೆ ಫಲ ನೀಡದ ಇತಿಹಾಸ ಇರುವಾಗ ಈ ಕಿಂಡಿ‌ ಅಣೆಕಟ್ಟು ಮತ್ತು ಏತನೀರಾವರಿ ಯೋಜನೆಗಳು ಮಾದರಿಯಾಗಿದೆ.‌ಶಿಕ್ಷಣ ಕ್ಷೇತ್ರದಲ್ಲೂ 5.50 ಕೋಟಿ ರೂ. ಎಂ.ಆರ್.ಪಿ.ಎಲ್ ಅನುದಾನದಲ್ಲಿ 55 ಸರಕಾರಿ ಶಾಲೆಗಳಲ್ಲಿ ವ್ಯವಸ್ಥಿತವಾದ ಶೌಚಾಲಯ ನಿರ್ಮಿಸಿರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜನರಿಗೆ ಆಸಕ್ತಿ ಮೂಡುವ ರೀತಿಯ ವಿಚಾರವಾಗಿದೆ. ಒಟ್ಟಿನಲ್ಲಿ ತಾಲೂಕನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ ಓರ್ವ ಶಾಸಕ ಏನು ಮಾಡಬಹುದು ಎಂಬುದನ್ನು ಅಧ್ಯಯನ‌ ಮಾಡುವ ರೀತಿಯಲ್ಲಿ ರೂಪಿಸಿದ್ದಾರೆ.‌

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಗ್ರಾಮಾಂತರದ ರಸ್ತೆಯನ್ನೂ 18 ಅಡಿ ಮಾಡಿ, ಎರಡು ವಾಹನ ಹಾದುಹೋಗುವ ರೀತಿಯಲ್ಲಿ ಸರ್ವ ಋತು ರಸ್ತೆಯಾಗಿ ಮಾಡಿದ್ದಾರೆ.‌ಉತ್ತಮ
ಕಲ್ಪನೆ, ಕನಸು ಇದ್ದಾಗ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತೋರಿಸಿದ್ದಾರೆ. ಒಟ್ಟಾರೆಯಾಗಿ ತಾಲೂಕನ್ನು ಪ್ರವಾಸೋದ್ಯಮ ರೀತಿಯಲ್ಲಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಏತ ನೀರಾವರಿಯಿಂದ ಎಂಟು ಗ್ರಾಮಗಳಿಗೆ ಪ್ರಯೋಜನದ ಜೊತೆಗೆ ಮುಗೆರಡ್ಕ -ಉಪ್ಪಿನಂಗಡಿ ಹೈಬೇ ಸೇರಿಸುವ ಕಾರ್ಯ, ಗುರುವಾಯನಕೆರೆ ಕೆರೆಯನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿ ಪಡಿಸಲು 15 ಕೋಟಿ ರೂ.‌ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದಾರೆ.ನಗರದ ಪ್ರಮುಖ ಭಾಗದಲ್ಲಿ ಸಾಲುಮರ ತಿಮ್ಮಕ್ಕ ಪಾರ್ಕ್ ಹೆಸರಿನಲ್ಲಿ 28 ಎಕ್ರೆ ಜಾಗದಲ್ಲಿ ಪ್ರವಾಸೋದ್ಯಮ ಕೇಂದ್ರ ಆಗುವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ತರುತ್ತಿದ್ದಾರೆ‌.ಉಜಿರೆ ನಿನ್ನಿಕಲ್ಲು ಬಳಿ 100 ಎಕ್ರೆ ಸ್ಥಳವನ್ನು ಕೈಗಾರಿಕಾ ಪಾರ್ಕ್ ಮಾಡುವಲ್ಲಿ ದೂರಗಾಮಿ ಯೋಜನೆ ರೂಪಿಸಿದ್ದು ಅದು ಮಂಜೂರಾಗುವ ಹಂತಕ್ಕೆ ಬಂದು ನಿಂತಿದೆ.

ಪ್ರತೀ‌ ಪಂಚಾಯತ್ ಗಳಲ್ಲೂ ತ್ಯಾಜ್ಯ ವಿಲೇವಾರಿ‌ ದೃಷ್ಟಿಯಲ್ಲಿ ಕೆಲಸ ಹಾಗೂ ತಾಲೂಕಿನ‌ ಎಲ್ಲಾ ತ್ಯಾಜ್ಯಗಳ ವಿಲೇವಾರಿ ಮಾಡುವ ದೃಷ್ಟಿಯಿಂದ ಸಂಪೂರ್ಣ ನೈರ್ಮಲ್ಯ ದೊಂದಿಗೆ ಸಂಜೆ ವೇಳೆ ವಾಕಿಂಗ್ ಮಾಡುವ ರೀತಿಯಲ್ಲಿ ಸಂಸ್ಕರಣ ಘಟಕ ನಿರ್ಮಿಸುವ ಉದ್ದೇಶ ಅವರ ಪರಿಕಲ್ಪನೆಯಲ್ಲಿದೆ. ಬೆಳ್ತಂಗಡಿ ಮಾದರಿ‌ ಶಾಲೆಯನ್ನು ಕನ್ನಡ ಕಲಿಯುವ ಪ್ರೇರಣೆ ದೊಡ್ಡ ರೂಪವನ್ನು ಕೊಡುವ ದೊಡ್ಡ ಉದ್ದೇಶದಿಂದ ಮಹತ್ವಪೂರ್ಣವಾಗಿ ಕಟ್ಟಲು ಕನಸು ಇಟ್ಟುಕೊಂಡಿದ್ದಾರೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಅಭಿವೃದ್ಧಿ ಒಂದೇ ನಮ್ಮ ಮಂತ್ರ ರೀತಿಯಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆಗಳನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ‌ ಇನ್ನಷ್ಟು ಹೊಸ‌ಯೋಚನೆ, ಯೋಜನೆಗಳನ್ನು ತರುವ ದೃಷ್ಟಿಯಲ್ಲಿ ವಿರೋಧ ಪಕ್ಷದವರಿಗೆ ಚರ್ಚೆಗೆ ಅವಕಾಶವೇ ಇಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ವಿರೋಧ ಪಕ್ಷಗಳು ಚರ್ಚೆ ಮಾಡಬೇಕಾದ ಜಾಗದಲ್ಲಿ ಚರ್ಚೆಗಳನ್ನು ಮಾಡದೆ ಬೀದಿ ಬೀದಿಯಲ್ಲಿ ನಿಂತು ಚರ್ಚೆ ಮಾಡುವುದು ಸರಿಯಲ್ಲ.

ಪ್ರತಿಪಕ್ಷ ಎಂಬ ಕಾರಣಕ್ಕೆ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಪೂರಕವಾಗಿ ಚರ್ಚಿಸದೇ ಇರುವುದು ಖೇದಕರ. ಈ ರೀತಿಯಾಗಿ ಮೊಸರಿನಲ್ಲಿ ಕಲ್ಲು ಹುಡುಕುವವರಿಗೆ ಸಮಾಧಾನ ಹೇಳಲು ನಮ್ಮಿಂದ ಸಾಧ್ಯವಿಲ್ಲ. ಯಾರೇ ಆಗಲಿ ‌ಮಾಡಿದ ಕೆಲಸ ಹೇಳುವುದರಲ್ಲಿ ಸಣ್ಣತನ ಇಲ್ಲ.‌ಒಳ್ಳೆಯ ಕೆಲಸ ಮಾಡಿದರೆ ಕನಿಷ್ಠ ಪಕ್ಷ ಒಳ್ಳೆಯ ಮಾತನ್ನಾದರೂ ಹೇಳಬಹುದು. ಸುಮ್ಮನೆ ಟೀಕಿಸಿ ಅಭಿವೃದ್ಧಿಯ ವೇಗ ಕುಂಠಿತಗೊಳಿಸಬೇಡಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಪ್ರತ್ಯುತ್ತರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ‌ ಶಾಸಕ‌ ಪ್ರಭಾಕರ ಬಂಗೇರ, ಬಿಜೆಪಿ ಮಂಡಲದ‌ ಅಧ್ಯಕ್ಷ ಜಯಂತ ಕೋಟ್ಯಾನ್, ಮಾಜಿ‌ ಅಧ್ಯಕ್ಷರುಗಳಾದ ಬಾಲಕೃಷ್ಣ ವಿ ಶೆಟ್ಟಿ ಸವಣಾಲು ಮತ್ತು ಪೂವಾಜೆ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!