ಮಂಗಳೂರು: ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಹೆದ್ದಾರಿ ಇದೀಗ ಹೊಂಡ ಗುಂಡಿಗಳ ರಾಜಮಾರ್ಗವಾಗಿ ಬದಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿಂದ ಅಡ್ಡಹೊಳೆ ತನಕ ಹೆದ್ದಾರಿ ಹೊಂಡ-ಗುಂಡಿಗಳಿಂದಲೇ ಮುಚ್ಚಿ ಹೋಗಿವೆ. ಈ ಹೊಂಡ ಗುಂಡಿಗಳನ್ನು ಮುಚ್ಚಲು ಹೆದ್ದಾರಿ ಇಲಾಖೆ ಈಗಾಗಲೇ 16 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಗುತ್ತಿಗೆ ನೀಡಿದೆ. ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಎರಡು ದಿನಗಳ ಕಾಲ ತೇಪೆ ಹಚ್ಚುವ ಕಾಮಗಾರಿ ನಡೆಸಿದ್ದು, ತೇಪೆಯೂ ಕಳೆಪೆಯಾದ ಕಾರಣ ಒಂದೇ ಮಳೆಗೆ ಎಲ್ಲವೂ ಕೊಚ್ಚಿಹೋಗಿವೆ.
ಈ ಹಿನ್ನಲೆಯಲ್ಲಿ ನಾಳೆ ಮಂಗಳೂರಿನಲ್ಲಿ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ದ.ಕ. ಜಿಲ್ಲೆಗೆ ಆಗಮಿಸುವ ಆಡಳಿತ ಪಕ್ಷದ ಸಚಿವರು, ಬಿಜೆಪಿ ರಾಜ್ಯ ಮುಖಂಡರು ಹಾಗೂ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರವಾಗಿ ಶಿರಾಟ್ ಘಾಟ್ ಮೂಲಕ ಆಗಮಿಸುವಂತೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದ.ಕ. ಜಿಲ್ಲೆಗೆ ಆಗಮಿಸುವ ಬಿಜೆಪಿ ನಾಯಕರುಗಳು ಮತ್ತು ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಸಕಲೇಶಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಮುಖಾಂತರ ಆಗಮಿಸಬೇಕು. ಹಾಗೂ ಈ ರಸ್ತೆಯ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ. ಆ ಮೂಲಕ ‘ರೋಡ್ ಚಾಲೆಂಜ್’, ‘ಚಿನ್ನದ ರಸ್ತೆ’ ಎಂಬ ಮಂಗಳೂರಿನಲ್ಲಿ ಟ್ರೆಂಡಿಂಗ್ ಆಗಿರುವ ಹ್ಯಾಶ್ಟ್ಯಾಗ್ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ.