ಉಡುಪಿ: ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯಾರ ಕುದ್ರು ಎಂಬಲ್ಲಿ ಎ.23ರಂದು ಸಂಜೆ ಹೊಳೆಯಿಂದ ಮರುವಾಯಿ ಹೆಕ್ಕಲು ಹೋಗಿ ಸಂಭವಿಸಿದ ದುರಂತದಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಇಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಪತ್ತೆಯಾಗಿದೆ.
ಮೃತರನ್ನು ಶೃಂಗೇರಿಯ ಮುಹಮ್ಮದ್ ಫರಾನ್(16) ಎಂದು ಗುರುತಿಸಲಾಗಿದೆ. ಎ.23ರಂದು ರಾತ್ರಿ 9ಗಂಟೆಗೆ ಶೃಂಗೇರಿಯ ಮುಹಮ್ಮದ್ ಸುಫಾನ್ (20), ಹೂಡೆಯ ಮುಹಮ್ಮದ್ ಫೈಜಾನ್(18) ಹಾಗೂ ಮುಹಮ್ಮದ್ ಇಬಾದ್(25) ಎಂಬವರ ಮೃತದೇಹಗಳು ಪತ್ತೆಯಾಗಿದ್ದವು.
ಸಂಬಂಧಿಕರಾದ ಸಾಹಿಲ್ ಖಾದರ್, ಮಾಹೀಮ್, ಸಾಹಿಲ್, ಸುಫಾನ್, ಫೈಜಾನ್, ಇಬಾದ್ ಮತ್ತು ಫರಾನ್ವರೊಂದಿಗೆ ಹೊಳೆಯಿಂದ ಕಪ್ಪೆಚಿಪ್ಪು ಹೆಕ್ಕಲು ಹೂಡೆಯಿಂದ ದೋಣಿಯಲ್ಲಿ ಕಿಯಾರ ಕುದ್ರು ಎಂಬಲ್ಲಿಗೆ ಹೊಳೆಯನ್ನು ದಾಟಿ ಹೋಗಿದ್ದರು. ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿ ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಮಳಿಯನ್ನು ಹೆಕ್ಕುತ್ತಾ ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋಗಿದ್ದರು. ಈ ವೇಳೆ ಫಾರನ್ ಜೊತೆಯಲ್ಲಿ ಸುಫಾನ್, ಇಬಾದ್, ಫೈಜಾನ್ ನೀರಿನ ಆಳದಲ್ಲಿ ಮುಳುಗಿ ಹೋದರು. ಉಳಿದ ಮೂವರು ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.