ಬಂಟ್ವಾಳದಲ್ಲೊಂದು ಅಚ್ಚರಿಯ ಘಟನೆ ಘಟನೆ ನಡೆದಿದೆ. 13 ವರ್ಷ ಇರುವಾಗ ಮನೆ ಬಿಟ್ಟು ಹೋದ ವ್ಯಕ್ತಿಯೊಬ್ಬರು ಬರೋಬ್ಬರಿ 62 ವರ್ಷಗಳ ಬಳಿಕ ಮನೆಗೆ ಮರಳಿದ್ದಾರೆ.
ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು. ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೇ ಕಳೆದುಕೊಂಡಿದ್ದರು.
ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಬಂದು ಮನೆ ಮಂದಿಗೆ ಆಶ್ಚರ್ಯ ಮೂಡಿಸಿದ್ದಾರೆ. ಆದರೆ ಆತ ಯಾಕೆ ಬಂದರು ಅಂತ ತಿಳಿದ ಮನೆಯವರಿಗೆ ಬೇಸರ ಮೂಡಿದೆ.
62 ವರ್ಷ ಬಾರದೇ ಇದ್ದವರು ಈಗ ಯಾಕೆ ಬಂದ್ರು ಅನ್ನೋ ಕಾರಣ ಗೊತ್ತಾಗಿ ಮನೆಯವರು ಬೇಸರಗೊಂಡಿದ್ದಾರೆ.
ಮನೆಯವರು ಈ ವರೆಗೆ ನೀವು ಎಲ್ಲಿದ್ದಿರಿ, ಇಲ್ಲಿ ತನಕ ಯಾಕೆ ಬರಲಿಲ್ಲ,ಈಗ ಯಾಕೆ ಬಂದಿರಿ? ಎಂದು ಸಂಜೀವ ಪೂಜಾರಿ ಅವರನ್ನು ಕೇಳಿದ್ದಾರೆ. ಆಗ ಅವರು ನಾನು ಮುಂಬಯಿಗೆ ಹೋದವನು ಹಲವಾರು ಕಡೆ ಕೆಲಸ ಮಾಡಿ ಬಳಿಕ ಲಾರಿ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ ನನಗೆ 60 ವರ್ಷ ಆಯ್ತಲ್ಲ. 60 ವರ್ಷದ ಬಳಿಕ ಅಲ್ಲಿ ಕೆಲಸಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಅಲ್ಲಿಲ್ಲಿ ಬೇರೆ ಬೇರೆ ಕೆಲಸ ಮಾಡಿ ಕಳೆದ 2 ವರ್ಷಗಳಿಂದ ಮುಂಬಯಿಯ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದೆ. ಆದರೆ ಆ ಹೋಟೇಲ್ ಮಾಲೀಕ ಸಂಬಳವನ್ನೇ ಕೊಟ್ಟಿಲ್ಲ.
ಹಾಗಾಗಿ ನಾನು ಜೂನ್ 4ರಂದು ಬಸ್ಸಿನಲ್ಲಿ ಮುಂಬಯಿಯಿಂದ ಹೊರಟು ಮಂಗಳೂರಿಗೆ ಆಗಮಿಸಿದೆ. ಅಲ್ಲಿಂದ ಪಾಣೆಮಂಗಳೂರಿಗೆ ಬಂದು ಸ್ವಗ್ರಾಮ ನರಿಕೊಂಬಿಗೆ ಬಂದಿದ್ದೇನೆ ಎಂದು ಮನೆಮಂದಿಗೆ ತಿಳಿಸಿದ್ದಾರೆ. ಹಾಗಾಗಿ ಈ ವ್ಯಕ್ತಿ ತನಗೆ ವಯಸ್ಸಾಯಿತು, ಇನ್ನು ತನ್ನಿಂದ ಆಗಲ್ಲ ಎಂದು ಮನೆಯವರ ಸಹಾಯ ಪಡೆಯಲು ಮಾತ್ರ ಬಂದುದು ಅನ್ನೋದು ಮನೆಯವರಿಗೆ ಖಾತರಿಯಾಗಿದೆ. ಆತ ಮನೆ ಬಿಟ್ಟು ಹೋಗಿ 6 ದಶಕಗಳೇ ಕಳೆದಿದೆ. ಆದರೆ ಈ ಇಳಿ ವಯಸ್ಸಿನಲ್ಲಿ ಮನೆಗೆ ಬರುವ ಮೊದಲು ಹಿಂದೆಯೇ ಬಂದಿದ್ದರೆ ಅವರಿಗೊಂದು ಚಂದದ ಬದುಕು ಕಟ್ಟಿಕೊಡಬಹುದಿತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.