ಬಂಟ್ವಾಳ: ತಮ್ಮನಿಗೆ ತಿಂಡಿ ತರುತ್ತೇನೆ ಎಂದು ತಿಳಿಸಿ ಪೇಟೆಗೆ ಹೋಗಿ ಬಾಲಕ ನಾಪತ್ತೆಯಾದ ಪ್ರಕರಣ ಇದೀಗ ಸುಖಾಂತ್ಯವಾಗಿದೆ. ಕಾಣೆಯಾದ ಬಾಲಕ ಧ್ಯಾನ್ ಪೊಳಲಿ ದ್ವಾರದ ಬಳಿಯ ಅಮ್ಟಾಡಿ ಎಂಬಲ್ಲಿ ಆಟೋ ಚಾಲಕರೊಬ್ಬರಿಗೆ ಸಿಕ್ಕಿದ್ದು ಇದೀಗ ತಂದೆ ಗಣೇಶ್ ಅವರಿಗೆ ಬಂಟ್ವಾಳ ನಗರ ಠಾಣಾ ಪೊಲೀಸರು ಬಾಲಕನನ್ನು ಹಸ್ತಾಂತರಿಸಿದ್ದಾರೆ.
ಬಿಸಿರೋಡು ಬಸ್ ನಿಲ್ದಾಣದ ಹಿಂಬದಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಗಣೇಶ್ ಎಂಬವರ ಮಗ ಧ್ಯಾನ್ ಬಂಟ್ವಾಳ ವಿದ್ಯಾಗಿರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಗಣೇಶ್ ಅವರು ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ವಿನಾಯಕ ಬೇಕರಿ ನಡೆಸುತ್ತಿದ್ದು, ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವರು ಊಟ ಮುಗಿಸಿ ಮಲಗಿದ್ದರು. ಇನ್ನು ತಾಯಿ ಬೇಕರಿಗೆ ತೆರಳಿದ್ದರು.
ಸಂಜೆ 5 ಗಂಟೆಗೆ ಧ್ಯಾವ್ ತಮ್ಮನ ಜೊತೆ ಶಾಲೆಯಿಂದ ಮನೆಗೆ ಬಂದವನು ಅಲ್ಲಿಂದ ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿದ್ದಾನೆ. ಹುಡುಗ ರಾತ್ರಿ 8 ಗಂಟೆಯಾಗುತ್ತಾ ಬಂದರೂ ಮನೆಗೆ ಬಂದಿರದ ಕಾರಣ, ಮನೆಯವರು ಹಾಗೂ ಪರಿಸರದ ಸಾರ್ವಜನಿಕರು ಜೊತೆಯಾಗಿ ಸಿ.ಸಿ.ಕ್ಯಾಮರಾದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.ಇದೀಗ ಬಾಲಕ ಪತ್ತೆಯಾಗಿದ್ದು ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.