ಮಂಗಳೂರು: ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಹಿಂದೆ ಕಳವಾಗಿದ್ದ ಬೈಕೊಂದು ಮತ್ತೆ ಅದರ ಮಾಲೀಕ ಕಣ್ಣ ಮುಂದೆ ಹಾದು ಹೋಗಿ ಕೊನೆಗೂ ಮಾಲೀಕ ಕೈಸೇರಿ ಅಚ್ಚರಿಯ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹಸಿರು ದಳ ಎನ್ಜಿಒ ಸಂಸ್ಥೆಯ ಸದಸ್ಯರಾಗಿರುವ ನಾಗರಾಜ್ ಬಜಾಲ್ ಎಂಬವರು 2022ರ ಮಾರ್ಚ್ನಲ್ಲಿ ಹಂಪನಕಟ್ಟೆಯ ರೂಪಾ ಹೊಟೇಲ್ ಬಳಿ ತಮ್ಮ ಬಜಾಜ್ ಅವೆಂಜರ್ ಬೈಕ್ ನ್ನು ಪಾರ್ಕ್ ಮಾಡಿದ್ದರು. ಅಲ್ಲಿಂದ ಅವರ ಬೈಕ್ ಕಳವಾಗಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಸಿ ಕೆಮರಾ ಪರಿಶೀಲಿಸಿದಾಗ ಯುವಕನೊಬ್ಬ ಬೈಕ್ ಕಳವು ಮಾಡುವ ದೃಶ್ಯ ಸೆರೆಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಬೈಕ್ ಮಾತ್ರ ಪತ್ತೆಯಾಗಿರಲಿಲ್ಲ.
ಅ. 9ರಂದು ಕಾರ್ಯನಿಮಿತ್ತ ನಾಗರಾಜ್ ಅವರು ಬಿಜೈನ ಜಯಲಕ್ಷ್ಮೀ ಮಳಿಗೆಯ ಬಳಿ ಸಂಚರಿಸುತ್ತಿದ್ದಾಗ ನಾಪತ್ತೆಯಾಗಿದ್ದ ಅವರ ಬೈಕ್ ರಸ್ತೆಯಲ್ಲಿ ಕಣ್ಣ ಮುಂದೆ ರಪ್ ಅಂತಾ ಪಾಸಾಗಿದೆ. ತಕ್ಷಣ ಅದನ್ನು ಬೆನ್ನಟ್ಟಿದ ಅವರು ಬಂಟ್ಸ್ ಹಾಸ್ಟೆಲ್ ಬಳಿ ಅಡ್ಡಹಾಕಿ ಬೈಕ್ ಸವಾರರನ್ನು ಹಿಡಿದು ನಿಲ್ಲಿಸಿದ್ದಾರೆ. ಬೈಕ್ ಚಲಾಯಿಸುತ್ತಿದ್ದವರು ಓರ್ವ ಹಿರಿಯರಾಗಿದ್ದರು.
ಅವರನ್ನು ಪ್ರಶ್ನಿಸಿದಾಗ ತನ್ನ ಮಾಲೀಕ ಬೈಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಮಾಲೀಕರನ್ನು ಕೇಳಿದಾಗ ಬೈಕ್ ಅನ್ನು ರೂಪಾ ಹೊಟೇಲ್ ಬಳಿಯ ಕಟ್ಟಡವೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ನಿಲ್ಲಿಸಲಾಗಿತ್ತು. ಕೀ ಮತ್ತು ಹೆಲ್ಮೆಟ್ ಕೂಡ ಅದರಲ್ಲಿತ್ತು. ಹಾಗಾಗಿ ಅದನ್ನು ಸರಿಪಡಿಸಿ ಕೆಲಸದವರಿಗೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಬಳಿಕ ಅವರೊಂದಿಗೆ ಬಂದರು ಠಾಣೆಗೆ ತೆರಳಿದ ನಾಗರಾಜ್ ಅವರು ನಡೆದಿರುವ ವಿಚಾರ ತಿಳಿಸಿ, ಬೈಕನ್ನು ಮತ್ತೆ ಪಡೆದುಕೊಂಡಿದ್ದಾರೆ.