ಬಾಗಲಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರ ಬಂದಾಗ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ, ಕಾಲಕಾಲಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಉದಾಹರಣೆಗಳು ಇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈಗ ನಮ್ಮ ಸರ್ಕಾರ ಬಂದಿದೆ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ಪಠ್ಯಪುಸ್ತಕ ವಿರೋಧಿಸುವ ಭರದಲ್ಲಿ ಬಿಜೆಪಿ ಸರ್ಕಾರವನ್ನು ವಿರೋಧಿಸಲು, ಪರಿವಾರದ ವಿಚಾರ ಉಲ್ಲೇಖ ಮಾಡಲು ಹಾಗೂ ಬೊಮ್ಮಾಯಿ ಸರ್ಕಾರದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಒಂದು ವೇದಿಕೆ ಬಳಸಿಕೊಂಡಿರಬಹುದು ಎಂದು ಸಚಿವರು ತಿಳಿಸಿದ್ದಾರೆ.
ಬಿಜೆಪಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸೂತ್ರ ಹಿಡಿದಾಗ ಕೆಲವರು ಅಸಹಿಷ್ಣುತೆ ಎಂದು ಪ್ರಶಸ್ತಿ ವಾಪಸ್ಸು ಕೊಡುತ್ತೇವೆ ಅಂದವರು ಯಾರೂ ಪ್ರಶಸ್ತಿ ವಾಪಸ್ಸು ಕೊಡಲಿಲ್ಲ, ಬರೀ ಝೆರಾಕ್ಸ್ ಪ್ರತಿ ಮಾತ್ರ ಕೊಟ್ಟಿದ್ದರು ಎಂದು ಸಚಿವರು ಹೇಳಿದ್ದಾರೆ.
ಯಾರಿಗೂ ಸಹ ಪಠ್ಯಪುಸ್ತಕದಲ್ಲಿ ಏನಿದೆ ಅಂತ ಓದುವ ಅವಶ್ಯಕತೆ ಇದ್ದಂತಿಲ್ಲ ಎಂದು ಹೇಳಿರುವ ಕೋಟ ಶ್ರೀನಿವಾಸ ಪೂಜಾರಿ, ಏನಾದರೂ ಮಾಡಿ ಸರ್ಕಾರದ ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡ್ತಿದ್ದಾರೆ, ಹೆಡಗೇವಾರ್ ವಿಚಾರದಲ್ಲಿ ಪುಸ್ತಕದಲ್ಲಿ ಇರುವುದನ್ನು ಯಾವುದನ್ನೂ ತೆಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.