ರಾಯಚೂರು: ಮಂತ್ರಾಲಯದಲ್ಲಿ 2020ರಲ್ಲಿ ನಡೆದ ಗುರುವೈಭವೋತ್ಸವ ವೇಳೆ ನಟ ಪುನೀತ್ ರಾಜ್ ಕುಮಾರ್ ಮಾತನಾಡುವಾಗ ರಾಯರ ಪ್ರಭಾವಳಿ ಮುಂಭಾರಗೊಂಡಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ ತಮ್ಮಂದಿರು ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಪುನೀತ್ ಹಾಡು ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸವಾರದು. ಇದೊಂದು ಕಾಕತಾಳೀಯ. ಪುನೀತ್ ಮಾತನಾಡುವ ವೇಳೆ ಆಕಸ್ಮಿಕವಾಗಿ ಪ್ರಭಾವಳಿ ಮತ್ತು ವೀಣೆ ಅಲುಗಾಡಿದೆ. ಉಯ್ಯಾಲೆ ಮೇಲೆ ವೀಣೆ ಇಟ್ಟು ತೂಗುವಾಗ ವೀಣೆ ಜಾರಿದೆ. ಆದರೆ, ಈ ಘಟನೆಗೂ ಪುನೀತ್ ಸಾವಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಪುನೀತ್ ದೇಹದಿಂದ ಪಂಚಭೂತಗಳಲ್ಲಿ ಲೀನವಾಗಿದ್ದರೂ ಅವರು ಅಭಿಮಾನಿಗಳ ಹೃದಯದಲ್ಲಿ ಸದಾ ಇರಲಿದ್ದಾರೆ. ವಿಡಿಯೋ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.