ನವದೆಹಲಿ: ಮನೆಯಿಂದ ಅನಗತ್ಯವಾಗಿ ಯಾರೂ ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡಿನ ಸಿ. ಮೋಹನ್ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಲೂನ್ ನಡೆಸುತ್ತಿರುವ ಮೋಹನ್ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ನೆರವಾಗಿದ್ದಾರೆ. ಅದೇ ರೀತಿ ಹಲವರು ಇಲ್ಲದವರಿಗೆ ನೆರವಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿಯೂ ಸಂಶೋಧನೆ ಮುಂದುವರೆದಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿದ್ದಾರೆ. ದೇಶವಾಸಿಗಳು ನೀಡಿದ ಸಹಕಾರ ಮೆಚ್ಚುವಂತಹುದು. ದೇಶಾದ್ಯಂತ ಜನರ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಜನ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ನಾವು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಯೋಗಾಭ್ಯಾಸ ಪ್ರಮುಖ ಸ್ಥಾನ ಪಡೆದಿದೆ. ಹರಿದ್ವಾರದಿಂದ ಹಾಲಿವುಡ್ವರೆಗೂ ಎಲ್ಲರು ಯೋಗವನ್ನು ಮಾಡ್ತಿದ್ದಾರೆ. ಹೀಗಾಗಿ ಎಲ್ಲರೂ ಯೋಗ ಮಾಡಿ ಕೊರೊನಾ ಓಡಿಸಿ ಎಂದು ಪ್ರಧಾನಿ ಕರೆ ನೀಡಿದರು. ಉಸಿರಾಟದ ಸಮಸ್ಯೆಗೆ ಯೋಗದಿಂದ ಪರಿಹಾರವಿದೆ. ಕಮ್ಯೂನಿಟಿ, ಯೂನಿಟಿ, ಇಮ್ಯೂನಿಟಿಗೆ ಸಹಕಾರಿಯಾಗಲಿದೆ.
ಅಲ್ಲದೇ, ಕೋಟಿ ಕೋಟಿ ಬಡವರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನ ಜಾರಿ ಮಾಡಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡಲಾಗ್ತಿದೆ. ಇದುವರೆಗೂ 1 ಕೋಟಿಗಿಂತ ಹೆಚ್ಚು ಜನರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು. ಶೇಕಡ 80% ಹಳ್ಳಿಗಳ ಜನರು ಉಚಿತ ಚಿಕಿತ್ಸೆ ಪಡೆದುಕೊಂಡಿದ್ದಾರೆ.