ಸುಳ್ಯ: ಸುಳ್ಯ ನಗರದ ಹೃದಯಭಾಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಮಧ್ಯೆ ಕೊಚ್ಚೆ ನೀರು ಹರಿಯುತ್ತಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸುಳ್ಯ ನಗರದಲ್ಲಿ ಅನುಷ್ಠಾನ ಮಾಡಲಾಗಿರುವ ಒಳಚರಂಡಿಯಿಂದ ಈ ರೀತಿ ಮಲಿನ ನೀರು ರಸ್ತೆಯ ಮಧ್ಯೆ ಹರಿಯುತಿದೆ.
ಒಳಚರಂಡಿಯ ಮ್ಯಾನ್ಹೋಲ್ ಒಡೆದಿದ್ದು ಅದರಿಂದ ಕೊಳಚೆ ನೀರು ಮೇಲೆ ಬರ್ತಿದೆ. ಇದು ರಸ್ತೆ ಮೇಲೆಯೇ ಹರಿಯುತ್ತಿದ್ದು ವಾಹನಗಳು ಸಂಚರಿಸುವಾಗ ನೀರು ಸುತ್ತಲೂ ಚಿಮ್ಮುತ್ತಿದೆ. ವಾಸನೆ ಮತ್ತು ಕೊಳಚೆ ನೀರಿನ ಕಾರಣ ನಡೆದಾಡಲೂ ಜನರು ಅಸಹ್ಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರಸ್ತೆ ಮಧ್ಯೆ ಇರುವ ಮ್ಯಾನ್ಹೋಲ್ ಕುಸಿದು ದೊಡ್ಡ ಹೊಂಡ ನಿರ್ಮಾಣವಾಗಿದೆ. ಇಲ್ಲಿ ಪೊಲೀಸ್ ಬ್ಯಾರಿಕೇಡ್ ಇರಿಸಲಾಗಿದೆ. ಇದರಿಂದ ವಾಹನಗಳ ಸುಗಮ ಪ್ರಯಾಣಕ್ಕೂ ತೊಂದರೆ ಉಂಟಾಗಿದೆ.
ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಸ್ ನಿಲ್ದಾಣದಿಂದ ಬಸ್ ಬಂದು ಮುಖ್ಯ ರಸ್ತೆಗೆ ಇಳಿದು ಮಂಗಳೂರು ಕಡೆಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಅಲ್ಲದೆ ದೊಡ್ಡ ವಾಹನ ಬಂದರೆ ಇಲ್ಲಿ ನಿರಂತರ ಟ್ರಾಫಿಕ್ ಜಾಮ್ ಆಗಿ ಕಿರಿ ಉಂಟಾಗುತ್ತಿದೆ. ಅತ್ಯಂತ ಜನನಿಬಿಡ ಪ್ರದೇಶವಾಗಿರುವುದರಿಂದ ಅಪಘಾತದ ಅಪಾಯವೂ ಇದೆ. ಹಲವಾರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಈ ರೀತಿಯ ಹೊಂಡ ನಿರ್ಮಾಣವಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದರೂ ಸಂಬಂಧಪಟ್ಟವರು ಗಮನಿಸಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.