ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಲೇಡಿಸ್ ಪಿಜಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಬಂದು ಯುವತಿಯರ ಬಟ್ಟೆ ಕದಿಯುತ್ತಿದ್ದ, ವಿಕೃತ ವರ್ತನೆ ತೋರುತ್ತಿದ್ದ ವಿಕೃತಕಾಮಿಯನ್ನು ಯುವತಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಾಲ್ಕೈದು ತಿಂಗಳುಗಳಿಂದ ಕೇರಳ ಮೂಲದ ವಿಕೃತ ಕಾಮಿಯೊಬ್ಬ ಬಂದು ಯುವತಿಯರ ಬಟ್ಟೆ ಕದಿಯುತ್ತಿದ್ದ. ಈ ಹಿಂದೆ ಎರಡು ಬಾರಿ ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮರುದಿನವೇ ಆತನನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ತಡರಾತ್ರಿಯೂ ಏಕಾಏಕಿ ವಿಕೃತಕಾಮಿ ಯುವತಿಯೊಬ್ಬಳ ರೂಮ್ ಪ್ರವೇಶಿಸಿ ಆಕೆಯ ಬಟ್ಟೆಯನ್ನು ಟೆರೇಸ್ ಮೇಲೆ ಕೊಂಡೊಯ್ದು ಇಟ್ಟಿದ್ದ. ಇದು ಗಮನಕ್ಕೆ ಬಂದು ಎಲ್ಲ ಯುವತಿಯರು ಹುಡುಕಾಟ ನಡೆಸಿದ್ದು ಈ ವೇಳೆ ಆತ ಟೆರೇಸ್ ಮೇಲೆ ಪತ್ತೆಯಾಗಿದ್ದಾನೆ. ಹಾಗೇ ಸಿಕ್ಕಿದವನಿಗೆ ಯುವತಿಯರೇ ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಯರ ಧರ್ಮದೇಟಿಗೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಉಮೇಶ್ ರೆಡ್ಡಿ, ಜೈಶಂಕರ್, ಸೈನೆಡ್ ಮೋಹನ್ ನಂಥವರ ವಿಕೃತ ಕೃತ್ಯಗಳು ಜನಮಾನಸದಲ್ಲಿ ಹಸಿರಾಗಿರುವಾಗಲೇ ಪೊಲೀಸರು ಇಂತಹ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.