ಬಂಟ್ವಾಳ: ಉಸಿರಾಟದ ತೊಂದರೆಯಿಂದ ಮಹಿಳೆಯೋರ್ವರು ದಾಖಲಾದ ಮರುದಿನ ಮೃತಪಟ್ಟಿದ್ದರು. ಕೊರೋನಾ ಪರೀಕ್ಷೆಯ ಬಳಿಕ ಮೃತ ದೇಹ ಬಿಟ್ಟು ಕೊಡುವಾಗ ಕಿವಿಯ ಬೆಂಡೋಲೆ ನಾಪತ್ತೆಯಾಗಿದೆ ಎಂದು ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದೂರು ನೀಡಿದ ಅಪರೂಪದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ನಿವಾಸಿ ಡೀಕಯ್ಯ ಎಂಬವರ ತಾಯಿ ಅನಾರೋಗ್ಯದಿಂದ ಮೃತಪಟ್ಟವರು. ಮೃತದೇಹವನ್ನು ಪಡೆದಕೊಳ್ಳುವ ವೇಳೆ ಕಿವಿಯಲ್ಲಿದ್ದ ಬೆಂಡೋಲೆಗಳು ಕಾಣಿಸದ ಹಿನ್ನಲೆಯಲ್ಲಿ ಅವರ ಮಗ ಆಸ್ಪತ್ರೆಯ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.
ಮೇ.5. ರಂದು ಬೆಳಿಗ್ಗೆ 1.50 ವೇಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಾಯಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ದಾಖಲು ಮಾಡಲಾಗಿದ್ದು, ಮರುದಿನ ಮೇ.6 ರಂದು ರಾತ್ರಿ 10 ಗಂಟೆಗೆ ತಾಯಿ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮರುದಿನ ಮೇ. 7 ರ ಬೆಳಿಗ್ಗೆ ಕೊರೊನಾ ವರದಿ ಬಂದ ಬಳಿಕ ಮೃತದೇಹವನ್ನು ನಮಗೆ ಹಸ್ತಾಂತರ ಮಾಡಿದ್ದಾರೆ. ಕೊರೊನಾ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದ್ದು, ವರದಿಯ ಬಳಿಕ ಮೃತದೇಹವನ್ನು ಅಂಬ್ಯುಲೆನ್ಸ್ ಗೆ ಶಿಪ್ಟ್ ಮಾಡುವ ವೇಳೆ ತಾಯಿಯ ಕಿವಿಯಲ್ಲಿದ್ದ ಎರಡು ಬೆಂಡೋಲೆಗಳು ಕಾಣುತ್ತಿರಲಿಲ್ಲ. ಈ ಬಗ್ಗೆ ಅಲ್ಲಿನ ಸಿಬ್ಬಂದಿಗಳಲ್ಲಿ ವಿಚಾರಿಸಿ ದಾಗ ಅವರು ಉಡಾಫೆ ಉತ್ತರ ನೀಡಿದರು.
ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ನೀವು ಪೋಟೋ ತೆಗೆದು ಕಳುಹಿಸಿ ಎಂದಾಗ ನಾವು ಮದುವೆಗೆ ಬಂದದ್ದಲ್ಲ, ತುರ್ತುಸ್ಥಿತಿ ಯಲ್ಲಿ ಆಸ್ಪತ್ರೆಗೆ ದಾಖಲಿಸಲು ಬಂದಿರುವುದು ಎಂಬ ಉತ್ತರ ನೀಡಿ ಆ ಬಳಿಕ ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರಿಗೆ ದೂರು ನೀಡಿದ್ದೇನೆ. ಎರಡು ದಿನ ಕಾದು ಅ ಬಳಿಕ ಪೋಲೀಸ್ ದೂರು ನೀಡುವುದಾಗಿ ಡೀಕಯ್ಯ ಅವರು ತಿಳಿಸಿದ್ದಾರೆ.